Saturday, 28 March 2015

ಇಣಚಿಯ ಕಥೆ
ಅಳಿಲಿನಂತೆ
ಉಲ್ಲಾಸದಿ
ಓಡಾಡುತ್ತ,
ಮರಗಳ ಮೇಲೆ
ನಲಿದಾಡುತ್ತ,
ಕಂಬಗಳ ಮೇಲೆ
ವಿಹರಿಸುತ್ತಾ,
ಎಲ್ಲಾ ಬಂಧನಗಳಿಂದ
ಮುಕ್ತವಾಗಿ
ಬಾಳಬೇಕೆಂದು
ಯೋಚಿಸುತ್ತಿರುವಾಗಲೇ
ವಿಧಿ ಲಿಖಿತ
ಬೇರೆಯೇ ಇತ್ತು
ಮೆರೆದಾಡಿದವ
ಮಣ್ಣಾದ
ಶಾಕು ಬಡಿದು
ಹೆಣವಾದ
ಆಗಿದ್ದವ ಈಗಿಲ್ಲ
ಅಳಿದ ಅಳಿಲಿಗೊಂದು
ಅಶ್ರುತರ್ಪಣ..
ನಮ್ಮ ಅನುಕೂಲಕ್ಕೆ
ನೀ ಬಲಿಯಾದೆ
ನಿನ್ನಂತ ಕೊಟ್ಯಾಂತರ ಜೀವಿಗಳ
ಶಾಪ ನಮ್ಮ ಮೇಲಿದೆ..!
ಆದರೂ ಕಳಕಳಿಯ ಮನವಿ
ಮತ್ತೆ ಹುಟ್ಟಿ ಬಾ ಗೆಳೆಯ
ಆಗಾಗ ಸಾವನ್ನೂ ಮರೆತು..!!
ಹಾಯ್ಕಿಗೊಂದು ಪ್ರಯತ್ನ

*ನೀರವತೆಗೆ
 ಕುದುರೆ ಕೆನೆಯಿತು
 ಕತ್ತಲ ಮೌನ


ಕಿತ್ತಳೆ ಚೆಂಡು
  ಆಗಸದ ನೇಸರ
  ಕಣ್ಣಿಗೆ ಹಿತ

Monday, 22 July 2013


                                                          ಅಪಘಾತುಕಗಳು

"ಏನ್ ಜನಗಳೋ ಏನೋ? ಮನುಷ್ಯತ್ವದ ಒಂದು ತುಣುಕಾದ್ರೂ ಬೇಡವಾ? ಅವರ ಮೂತಿಗಿಷ್ಟು ಬರೇ ಹಾಕಾ.. ಅವರ ಪಿಂಡ ಏಲಿಯನ್ ನೆಕ್ಕಾ.. ನಾನೇನಾದ್ರೂ ದೇವರಾಗಿದ್ರೆ, ನನ್ನತ್ರ ಏನಾದ್ರೂ ಸೂಪರ್ ನ್ಯಾಚುರಲ್ ಪವರ್ ಇದ್ದಿದ್ರೆ ಆಗ ತೋರಿಸ್ತಿದ್ದೆ ನನ್ನ ಕೆಪ್ಯಾಸಿಟಿನ, ಈಗಲೂ ನೆನಸ್ಕೊಂಡ್ರೆ ಎಲ್ಲೆಲ್ಲೋ ಉರಿತದೆ.." ಹೀಗೆ ಎರ್ರಾಬಿರ್ರಿ ಬೈಗುಳಗಳ ಸುರಿಮಳೆ ಸುರಿಸ್ತಾ ಇದ್ದ ನಮ್ಮ ಡೊಂಕೇಶ. ನಾನೂ ನಮ್ಮ ಕ್ರಾಕ್ ಬಾಯ್ ಇಬ್ಬರೂ ಲೆಮನ್ ಟೀ ಕುಡೀವಾ ಅಂತ ಹೋದೋರು, ಅಲ್ಲಿಯೇ ಇದ್ದ ನಮ್ಮ ಡೊಂಕೇಶನ ಆರ್ಭಟ ಕೇಳೀ ಕ್ಷಣಕಾಲ ತಬ್ಬಿಬ್ಬಾದೆವು..!!
"ಯಾಕ್ಲಾ ಡೊಂಕೂ, ಏನಾತೋ? ಯಾಕೋ ಹಿಂಗೆ ಮಾರಮ್ಮನ್ ಡಿಸ್ಕ್ ನುಂಗಿರೋ ಹಳೇ ಗ್ರಾಮಫೋನ್ ತರಾ ಅರಚುಗೋತಾ ಇದೀಯಾ? ಏನಾತೂ ಅಂತ ಸಮಾಧಾನವಾಗಿ ಹೇಳು ಕೇಳುವಾ" ಅಂತಂದೆ.
"ಫ್ಲಾಪೀ ಅಣ್ಣಾ ಏನೂ ಅಂತಾ ಹೇಳಲಿ, ನಮ್ಮ ಜನಗಳು ಯಾವಾಗ ಸುಧಾರಿಸ್ತಾರೆ ಅನ್ನೋದೇ ನಂಗೆ ಚಿಂತೆ ಆಗೋಗಿದೆ. ಈ ಚಿಂತೆಯೇ ಮುಂದೊಂದು ದಿನ ನನ್ನ ಚಿತೆಗೆ ಕಾರಣ ಆಗತ್ತಾ ಅಂತಾ ನಂಗೆ ಒಂದೇ ಸಮನೇ ಭಯ ಸುರು ಆಗೋಗದೆ. ನಮ್ಮ ಸಮಾಜದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳೊದ ಯಾರೂ ಗುರುತಿಸದೇ ಇದ್ದದ್ದು ಸಮಾಜದ ದುಭರ್ಾಗ್ಯವೇ ಸರಿ. ನನ್ನಂಥ ಪ್ರಜೆಗಳು ಹುಚ್ಚಾಸ್ಪತ್ರೆಯ ಕಾಂಪೋಡರ್ ತರ ಸುಮ್ನೇ ನಮ್ಮ ಜನಗಳ ಹುಚ್ಚಾಟ ನೋಡೋದೆ ಆಗೋಯ್ತು, ಅಳಂಗಿಲ್ಲ ನಗಂಗಿಲ್ಲ.." ಹೀಗೇ ಒಂದೇ ಸಮನೇ ಲಡಲಡಾಯಿಸ್ತಾ ಇದ್ದ..
ಇವನ ಈ ಮಾತುಗಳ ಕೇಳಿ ನಮ್ಮ ಕ್ರಾಕ್ ಬಾಯ್ಗೇ ಅದೆಲ್ಲಿತ್ತೋ ಸಿಟ್ಟು ಕಿತ್ಗೋಂಡ್ ಬಂದು ಅದೇ ಸಿಟ್ಟಲ್ಲೇ "ಲೋ ಡೊಂಕಾ ಸರಿಯಾಗಿ ಮ್ಯಾಟರ್ ಹೇಳೋದಿದ್ರೆ ಹೇಳು, ಹಿಂಗೇ ನೀ ಕಪ್ಪೆ ತಿನ್ನೋನ್ ತರಾ ವಟವಟ ಅಂತಾ ಇದ್ರೆ ನನ್ನ ಕೈಲಿರೋ ಈ ಸಿಗರೇಟ್ ಇಂದಾನೇ ನಿನ್ನ ಸಜೀವ ದಹನ ಮಾಡಿ ಆ ಬೂದೀನಾ ಕೆಂಗೇರಿ ಮೋರಿಗೆ ಕಾಕ್ತೀನಿ, ಏನ್ ಹೇಳ್ಬೇಕು ಅಂತಾ ಇದಿಯಾ ಅದನ್ನ ನೇರವಾಗಿ ಬೊಗಳು" ಅಂದ ರೇಗುತ್ತಾ.
"ಕ್ರಾಕ್ ಅಣ್ಣಾ ಬೈಬೇಡ ಕಣಣ್ಣಾ, ಆ ದೃಶ್ಯ ನೋಡಿ ನನ್ನ ಬ್ಲಡ್ಡು ನೂರಾ ಎಂಟು ಡಿಗ್ರಿ ಪ್ಯಾರನ್ ಹಿಟ್ ಅಲ್ಲಿ ಕೊತಕೊತನೆ ಕುದ್ದೋಯ್ತು ಗೊತ್ತಾ" ಅಂದ ದೈನ್ಯತೆಯಿಂದ.
"ಏನೂ ಅಂತಾ ಬೇಗಾ ಹೇಳೋ ಡೊಂಕು ಒಳ್ಳೇ ಸೀದೋಗಿರೋ ಬಬ್ಬಲ್ ಗಮ್ ತರಾ ಎಳಿಬೇಡಾ, ನಮಗೆ ಈಗ ಜಾಸ್ತಿ ಟೈಮ್ ಇಲ್ಲಾ ಮಾರಾಯ.. ನಮ್ ಬಾಸ್ ಹತ್ರ ಸಾಲ ಕೇಳಿ ಟೈಮ್ ಇಸಕಂಡ್ ಬಂದೀವೀ.. ವದರು ಏನು ನಿನ್ನ ರೋಧನೆ??" ಅಂತಾ ನಾನು ಕೇಳಿದೆ.
"ರೋಡಲ್ಲಿ ಜನಜಂಗುಳಿಯಿಂದ ತುಂಬಿ ಹೋಗಿದ್ದ ರೋಡು. ಎದುರುಗಡೆ ಇಂದ ಒಂದು ಕರೀಶ್ಮಾ ಬೈಕು, ಎಡಗಡೆಯಿಂದ ಒಂದು ಬುಲೆಟ್ ಗಾಡಿ ಸ್ಪೀಡಾಗಿ ಬಂದು ಟನರ್ಿಂಗನಲ್ಲಿ ಪರಸ್ಪರ ಡಿಚ್ಚಿ ಹೊಡಕಂಡು ಮಕಾಡೆ ಬಿದ್ದವು., ಡಿಕ್ಕಿ ಹೊಡೆದ ರಭಸಕ್ಕೆ ಬೈಕಿನ ಪಾಟರ್ು ಪಾಟರ್ುಗಳೇ ಅದುರಿ ಎಗರೋದ್ವು. ಬೈಕ್ ಓಡಿಸ್ತಾ ಇದ್ದವ್ರು ಇಬ್ರೂ ಕಾಲೇಜ್ ಯುವಕರು. ಒಬ್ಬನ ಹೆಲ್ಮೇಟೇ ತುಂಡಾಗಿ ತಲೆ ಒಡೆದು ರಕ್ತ ಚಿಲ್ಲನೆ ಚಿಮ್ಮಿತು. ಇನ್ನೊಬ್ಬನ ಬಾಯಿಯ ದವಡೆಯೇ ಮುರಿದು ಅವನ ಮಕಾ ದೇವರಿಗೆ ಬಲಿ ಹೊಡೆದ ಕುಂಬಳಕಾಯಿ ತರಾ ಆಗೋಯ್ತು. ಇಬ್ಬರೂ ಬಿದ್ದು ಒದ್ದಾಡ್ತಾ ಇದ್ರೂ ಜನಗಳು ಮಾತ್ರ ಎಲ್ಲಾ ನೋಡ್ತಾ ಹಂಗೇ ನಿಂತ್ ಬಿಟ್ಟಿದ್ರು, ಯಾವೊಬ್ಬನೂ ಅವರ ಬಳಿ ಹೋಗಲೇ ಇಲ್ಲ. ನನಗದು ಉರಿದೋಯ್ತು, ನೀವೇನಾದ್ರೂ ಅದನ್ನ ನೋಡಿದ್ರೆ ಗೊತ್ತಾಗ್ತಾ ಇತ್ತು ನನ್ನ ಕಷ್ಟವ..!" ಹೀಗಂದ ನಮ್ಮ ಡೊಂಕೇಶ ಗಡಿಗೆ ಮಕಾ ಮಾಡಿಕೊಂಡು.
"ಹೌದು ಕಣಾ ಯಾರಿಗೆ ಬೇಕು ಆಕ್ಸಿಡೆಂಟ್ ಕೇಸ್, ಆಸ್ಪತ್ರೆ, ಪೋಲಿಸು, ವಿಚಾರಣೆ ಇಂಥಾ ಕಿರಿಕಿರಿಯೇ ಬೇಡಾ ಅಂತಾ ಜನಗಳು ನೋಡಿದ್ರೂ ನೊಡದ ತರಾ ಸುಮ್ನೆ ಇದ್ದು ಬಿಡ್ತಾರೆ ಯಾರೂ ಹೆಲ್ಪ ಮಾಡಕ್ಕೆ ಮುಂದೆ ಬರಲ್ಲ, ಒಂಥರಾ ಯಾರೋ ಮಾಡಿಕೊಂಡ ತಪ್ಪು..., ಅನುಭವಿಸಲಿ ಅನ್ನುವ ಉದಾಸೀನ ನಮ್ಮ ಜನಕ್ಕೆ, ಇವರೆಲ್ಲಾ ಯಾವಾಗ ಸರಿ ಹೋಗ್ರಾರೋ ಏನೋ?" ಎಂದು ನಿರಾಶೆಯ ನಿಟ್ಟುಸಿರು ಬಿಟ್ಟ ನಮ್ಮ ಕ್ರಾಕ್ ಬಾಯ್..
ಯಾಕೋ ಡೊಂಕೇಶನ ಮಾತು ನನಗೆ ವಿಚಿತ್ರವಾಗಿ ಕಂಡಿತು. "ಈಗ ಜನರೂ ಸುಧಾರಿಸಿದ್ದಾರೆ, ವಿವೇಚನೆ ಬೆಳೆಸಿಕೊಂಡಿದ್ದಾರೆ. ಮೊದಲಿನ ತರಾ ಇಲ್ಲ ಮಾರಾಯಾ, ಕಾನೂನು ಕೂಡಾ ನಮಗೇ ಸಪೋಟರ್್ ಮಾಡ್ತದೆ. ಅಪಘಾತವಾದರೂ ಜನ ನಮ್ಮ ಸಹಾಯಕ್ಕೇ ಬಂದೇ ಬರುತ್ತಾರೆ. ನನಗೇ ಗೊತ್ತಿರೋ ಪ್ರಕಾರ ಹೋದ ತಿಂಗಳು ನಮ್ಮ ಆಪೀಸಿನ ಎದುರುಗಡೆ ರೋಡಲ್ಲಿ ಚೂಡೀದಾರದ ವೇಲು ಬೈಕಿಗೆ ಸಿಕ್ಕಾಕ್ಕಂಡು ಬಿದ್ದ ಆ ಆಂಟಿಯನ್ನು ನಾವೇ ಉಪಚರಿಸಿಲ್ಲವಾ?? ಅಷ್ಟೇ ಯಾಕೇ ಹೋದವಾರ ನಾನೂ ಕ್ರಾಕು ಬೈಕಲ್ಲಿ ಹೋಗ್ತಾ ಇರೋವಾಗ ಚೆಡ್ಡಿ ಹಾಕ್ಕೊಂಡಿರೋ ಪಿಗರ್ ನಾ ಹಿಂತಿರುಗಿ ನೋಡ್ತಾ ನೋಡ್ತಾ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಾಗ ಅಲ್ಲಿದ್ದ ಜನರೇ ಅಲ್ಲವಾ ನಮ್ಮನ್ನು ಎಬ್ಬಿಸಿದ್ದು..! ಯಾಕೋ ಕ್ರಾಕು ಮರೆತು ಬಿಟ್ಟೆಯಾ??" ಎಂದೆ.
"ಹೌದು ಕಲ ಡೊಂಕು, ನೀನು ಹೇಳೋತರ ಮೊದಲಿದ್ರು, ಆದರೆ ಈಗಿಲ್ಲ. ಅಪಘಾತವಾದಾಗ ಜನ ಬರ್ತಾರೆ. ಆದರೆ ಆ ಕ್ಷಣದಲ್ಲಿ ಏನು ಮಾಡೋದು ಅಂತಾ ತೋಚದೇ ಕ್ಷಣಕಾಲ ತಬ್ಬಿಬ್ಬಾಗ್ತಾರೆ ಅಷ್ಟೇ, ಒಬ್ಬ ಮೊದಲು ಮುಂದೆ ಬರುತ್ತಿದ್ದಂತೇ ಎಲ್ಲರೂ ಸಹಾಯಕ್ಕೆ ಕೈಜೋಡಿಸುತ್ತಾರೆ. ಮನ ಮಿಡಿಯುತ್ತಾರೆ. ಇಂತಹ ಅನೇಕ ಘಟನೆಗಳಿಗೆ ನಾನೇ ಸಾಕ್ಷಿ." ಅಂದ ಅನುಭವಸ್ಥನಂತೆ.
"ಅದು ಸರಿ, ಆಕ್ಷಿಡೆಂಟ್ ಆಗಿದ್ದು ಎಲ್ಲಿ?? ಎಷ್ಟೊತ್ತಿಗೆ?? ಅದನ್ನ ನೋಡಿ ನೀನೇನು ಮಾಡಿದೆ? ನಮ್ಮ ಜನಗಳು ಅದನ್ನು ನೋಡಿಕೊಂಡು ಸುಮ್ನೆ ಇದ್ರಾ? ಇಷ್ಟೊಂದು ಬೈದಾಡ್ತಾ ಇರೋ ನೀನೂ ಡೊಂಬರಾಟ ನೋಡೋ ತರಾ ಅದನ್ನ ನೋಡ್ತಾ ನಿಂತಿದ್ಯಾ??" ಅಂತ ಡೊಂಕೆಶನ್ನ ಕೇಳಿದೆ.
"ನಾ ಏನ್ ಮಾಡಕಾಗ್ತದೆ ಕಣಣ್ಣಾ, ಸುಮ್ನೆ ಮಲಕ್ಕಂಡು ನೋಡ್ತಾ ಇದ್ದೆ..... ಎರಡು ಘನಘೋರ ಅಪಘಾತಗಳು, ರಕ್ತದಾ ಜಲಧಾರೆಗಳು... ಎದೆ ನಡುಗಿಸುವ ಶಬ್ದಗಳು.. ಸಹಾಯಕ್ಕೇ ಬಾರದ ಮೂಕ ಪ್ರೇಕ್ಷಕರಾಗಿರುವ ಜನಗಳು.. ಇನ್ನೇನೋ ಆಗ್ತದೆ, ಅವರಿಬ್ಬರೂ ಇವತ್ತೇ ಟಿಕೇಟ್ ತಗೋತಾರೆ ಅಂದಾಗಲೇ ಆ ಹಾಳಾದ ಚಾನಲ್ ನವರು ಸೀರಿಯಲ್ ನ ಇವತ್ತಿನ ಎಪಿಸೊಡ್ ಮುಗಿಸಿ ನಾಳೆಗೆ ಮುಂದೂಡಿ ಬಿಟ್ರು..!!" ಅಂದಾ ಮಿಕಿಮಿಕಿ ಕಣ್ಣು ಬಿಡುತ್ತಾ...
"ಅಯ್ಯೋ ಹುಚ್ಚು ಬಡ್ಡೀತದೇ, ಇಷ್ಟೊತ್ತು ಸೀರಿಯಲ್ ಕತೆ ಹೇಳಿ ನಮ್ಮತ್ರ ಗೋಳಾಡ್ತಾ ಇದೀಯಾ?? ಲೋ, ಕ್ರಾಕು ತೊಗೊಳ್ಳಲಾ ಸೈಡಲ್ಲಿರೋ ಆ ಸೈಜ್ಗಲ್ಲನ್ನ, ಇವತ್ತು ಇವನ ತಲೆ ಮೇಲೆ ಕಲ್ಲೆತ್ತಾಕೀ ಜನಗಳು ಬರ್ತಾರೋ ಇಲ್ವೋ ಅಂತಾ ಅವನಿಗೇ ತೋರಿಸುವಾ" ಅಂತಂದೇ ಕೆಂಡಾಮಂಡಲಗೊಂಡು..!!
ನಮ್ಮಿಬ್ಬರ ರೌದ್ರಾವತಾರವ ಕಂಡು ಸತ್ತೆನೋ ಬಿದ್ದೆನೋ ಅಂತಾ ಕಾಲಿಗೆ ಬುದ್ದಿ ಹೇಳಿದ್ದ ನಮ್ಮ ಡೊಂಕೇಶ...!

Tuesday, 16 July 2013

ಮ್ಯಾನರ್ಸ್ ಇಲ್ಲದ ನಾನ್ಸೆನ್ಸ್ ಕುಡುಕರು!!

ಆಗ ಸಮಯ ರಾತ್ರಿ ಸುಮಾರು ಒಂಭತ್ತೂವರೆ. ಆಫಿಸಲ್ಲಿ ತುಂಬಾ ಕೆಲಸವಿದ್ದರಿಂದ ಮನೆಗೆ ಹೊರಡೋದು ಲೇಟಾಯ್ತು. ಅಂದು ಭಾನುವಾರವಾದ್ದರಿಂದ ಬಸ್ಸುಗಳು ಬೇರೇ ವಿರಳವಾಗಿತ್ತು. ಇನ್ನೂ ಎಷ್ಟೊತ್ತು ಕಾಯಬೇಕಾಗತ್ತೋ ಅನ್ನುವ ಅನುಮಾನದಿಂದ ವಿಜಯನಗರದ ಬಿಎಂಟಿಸಿ ಬಸ್ ಸ್ಟಾಪಿನಲ್ಲಿ ಬಸ್ಸಿಗೆ ಕಾಯುತ್ತಾ ನಿಂತೆ. ಕಾದಿದ್ದೇ ಕಾದಿದ್ದು ಸುಮಾರು ಇಪ್ಪತ್ತು ನಿಮಿಷಗಳಾದ್ರೂ ಯಶವಂತಪುರದ ಕಡೆಗೆ ಹೋಗುವ ಯಾವುದೇ ಬಸ್ಸು ಬರಲಿಲ್ಲ, ಅಲ್ಲಿಯೇ ಇದ್ದ ಆಟೋ ರೇಟು ಕೇಳಿ ನನ್ನ ಬಾಯಿಂದ ಬೆಂಕಿಬರುವುದೊಂದು ಬಾಕಿ. ಆ ಪಾಟಿ ಅವರ ರೇಟಿನ ಘಾಟಿ, ಮಾತಿನ ದಾಟಿ. ರಾತ್ರಿ ಆಗುತ್ತಿದ್ದಂತೆ, ಹೆಚ್ಚು ದುಡ್ಡು ಕೀಳುವುದರಲ್ಲೇ ಅವರ ಪೈಪೋಟಿ. ಹೊಟ್ಟೆ ಬೇರೆ ಹಸಿಯುತ್ತಿತ್ತು, ಆದರೆ ಅಲ್ಲಿ ತಿನ್ನಲೂ ಸರಿಯಾಗಿ ಏನೂ ಸಿಗದೇ ಇದ್ದದ್ದು, ನನ್ನ ಅಂದಿನ ದಿನದ ದುರಂತ. ಬಸ್ಸಿಗೆ ಕಾಯುತ್ತಾ ನಿಂತವರಲ್ಲಿ ನಾನೊಬ್ಬನೇ ಏನೂ ಅಲ್ಲ, ಗಂಡಸರು ಮುದುಕರು ಯುವಕರಾದಿಯಾಗಿ ಮಹಿಳೆಯರೂ ಕೂಡಾ ಇದ್ದರು. ಕೆಲ ಸುಂದರ ಯುವತಿಯರೂ ಇದ್ದರು.

ಸಮಯ ಯಾರಿಗೂ ಕಾಯದೇ ತನ್ನ ಕಾಯಕ ಮಾಡುತ್ತಲೇ ಇತ್ತು. ಜನಗಳೂ ಪಯರ್ಾಯ ಮಾರ್ಗಹಿಡಿದು ತಮ್ಮ ಮನೆ ಕಡೆ ಆಟೋ ಮುಖಾಂತರವೋ, ಕ್ಯಾಬ್ಗಳನ್ನು ಹಿಡಿದೋ ತಮ್ಮ ತಮ್ಮ ಮನೆ ಕಡೆ ದೌಡಾಯಿಸಲು ತವಕಿಸುತ್ತಿದ್ದರು. ಒಂದು ಕಡೆ ನಮ್ಮ ಬಸ್ಸು ಬರದೇ, ಬೇರೆ ಬೇರೆ ಮಾರ್ಗದ ಬಸ್ಸು ಬರುತ್ತಿದ್ದದ್ದು ನೋಡಿ ನನ್ನ ಹೊಟ್ಟೆಯಲ್ಲಿ ಚಿತ್ರಾನ್ನ ಕಲಸಿದಂತೇ ಅನಿಸಹತ್ತಿದರ,ೆ ಇನ್ನೊಂದೆಡೆ ಬಸ್ ಸ್ಟಾಪಿನಲ್ಲಿ ನಿಂತಿದ್ದ ಜನರ ಗುಂಪು ನಿಧಾನವಾಗಿ ಕರಗುತ್ತಿರುವುದ ನೋಡಿ ಮತ್ತಷ್ಟು ಬೇಸರವಾಗತೊಡಗಿತು. ಅಂತೂ ಇಂತೂ ನನ್ನ ಪೂರ್ವಜನ್ಮದ ಪುಣ್ಯದ ಫಲವೋ ಏನೋ ಎಂಬಂತೆ ಊರೆಲ್ಲಾ ಸುತ್ತಿ ಬಸವಳಿದು ಡೀಪೋ ಹಾದಿ ಹಿಡಿದಿದ್ದ ನಮ್ಮ ಮನೆ ರೂಟಿನ ಬಸ್ಸಂತೂ ಬಂತು. ರಾತ್ರಿಯಾಗಿದ್ದರಿಂದ ಸೀಟಿಗೇನೂ ಕಷ್ಟವಾಗಿರಲಿಲ್ಲ. ಇನ್ನು ಎಲ್ಲಾ ನಿರಾಳ ಅರಾಮವಾಗಿ ಮನೆ ಸೇರಿ ಊಟ ಮಾಡಿ ಪಾಚ್ಕೋಬೇಕು ಅಂತ ಯೋಚಿಸುತ್ತಿದ್ದಾಗಲೇ ಸುರುವಾಗಿದ್ದು ನಿಜವಾದ ಕಷ್ಟ..!!

ಸೀಟ್ ಏನೋ ಸಿಕ್ತು. ಆದರೆ ಆ ಬಸ್ಸಿನಲ್ಲಿ ಬಹುಪಾಲು ಗಂಡಸರೇ ಇದ್ದಿದ್ದು ಅವರಲ್ಲಿ ಮುಕ್ಕಾಲು ಮಂದಿ ಯಾವುದೋ ರಾಜಕೀಯ ಮಂದಿಯ ಭರ್ಜರಿ ಸಮಾವೇಷ ಮುಗಿಸಿ, ಸೇಂಧಿ ಸಮಾರಾಧನೆಯ ನಶೆಯಲ್ಲಿ ತೇಲುತ್ತಿದ್ದದ್ದು ವಿಶೇಷವಾಗಿತ್ತು. ಅಲ್ಲಿ ತುಂಬಿ ತುಳುಕಾಡುತ್ತಿದ್ದ ಆ ಘಮಘಮ(?), ಎಣ್ಣೆ ವಾಸನೆಗೆ ನನ್ನ ಮೂಗೇ ಕಿತ್ತುಕೊಂಡು ಪಾತಾಳ ಸೇರುವುದೇನೋ ಅನ್ನುವಷ್ಟರ ಮಟ್ಟಿಗೆ ಮೂಗು ಗೋಳಾಡಲಾರಂಭಿಸಿತು. ಇದು ಸಾಲದೆಂಬಂತೆ ಅವರ ಆ ಕಿತ್ತೋದ ಸಂಭಾಷಣೆಗಳು, ಹೈ ಡೆಸಿಬಲ್ನ ಸುಂದರ ಬೈಗುಳಗಳು, ಕೇಳಿ ಕಕ್ಕಾಬಿಕ್ಕಿಯಾಗಿ ಮೂಗು ಮುಚ್ಚಿಕೊಂಡು ಕುಂತಿದ್ದೆ. ನನ್ನ ಕಥೆಯೇ ಹೀಗಿರುವಾಗ ಪಾಪ ಬಸ್ಸಿನಲ್ಲಿದ್ದ ಏಳೆಂಟು ಮಹಿಳೆಯರ ಗತಿ ಹೇಗಾಗಿರಬೇಡ? ಮೊದಲೇ ಅಲ್ಲಿದ್ದ ಬಹುಸಂಖ್ಯಾತ ಕುಡುಕರ ಸೆನ್ಸರ್ಲೆಸ್ ಮಾತುಗಳು, ಉದರದ ಕೆಳಗಿನ ಬೈಗುಳದ ಭಾಷೆಗಳು, ಬಾಯಿ ತೆಗೆದರೆ ಕೆಂಗೇರಿ ಮೋರಿಯನ್ನೇ ಅಪೋಶನ ತೆಗೆದುಕೊಂಡಂತಹ ನಾಥ, ದುರ್-ನಾತ. ವಾಕರಿಕೆಯಿಂದ ವಾಮಿಟ್ ಮಾಡೋಣವೆಂದರೆ ಊಟ ಬೇರೆ ಮಾಡಿರಲಿಲ್ಲ, ಹಾಳಾದ್ದು ಅದು ಕೂಡಾ ಬರಲಿಲ್ಲ. ಸಾಲದ್ದಕ್ಕೆ ಒಂದಿಬ್ಬರ ಚೈನಾ ಸೆಟ್ ಮೊಬೈಲ್ನ ಬೇರೆಬೇರೆ ತರದ ಇತ್ತೀಚಿನ ದಿನಗಳ ಕನ್ನಡ ಹಾಡುಗಳು ಬೇರೆ.! ಕೊನೆಗೆ ಅವರಲ್ಲಿ ಕೆಲವರು ಕುಂತಿದ್ದು ಹುಡುಕಿ ಹುಡುಕಿ ಲೇಡೀಜ್ ಸೀಟನಲ್ಲೇ..!! ಇವೆಲ್ಲವುಗಳ ಮಧ್ಯೆಯೇ ರಾತ್ರಿ ಕೊನೇ ಪಾಳಿ ಮುಗಿಸಿ ಮನೆಗೆ ಹೋಗುವ ಆತುರದಲ್ಲಿದ್ದ ಲೇಡಿ ಕಂಡಕ್ಟರ್ ನಮ್ಮ ಬಸ್ ನಿವರ್ಾಹಕಿ,,! ಇದನ್ನ ನೋಡಿ ನನ್ನ ಕರುಳು ಕಿತ್ತು ಬಂದಂತೆ ಆದರೂ ಸಹಿಸಿಕೊಂಡು ಕುಂತಿದ್ದೆ (ಬೇರೆ ವಿಧಿ ಇಲ್ಲದೆ).

ಕುಡುಕರತ್ರ ವಾದ ಮಾಡೋದು ನಮ್ಮ ಮೂಗಿಗೆ ಎಫೆಕ್ಟು. ಏನಾದರೂ ಹೇಳಿದರೆ ತಲೆಗೆ ಎಫೆಕ್ಟು. ಹಿಂಗಂದುಕೊಂಡೇ ಟೈಟ್ ಆಗಿಲ್ಲದ ನನ್ನಂತ ಕೆಲವರು ಸಹಿಸಿಕೊಂಡು ಮೂಕಪ್ರೇಕ್ಷಕರಾಗಿದ್ದೆವು. ಅತ್ಲಾಗೆ ಟೈಟ್ ಆಗಿರೋ ಈ ಕುಡುಕರನ್ನ ನೋಡಬೇಕೋ ಅಥವಾ ಲೂಜ್ ಲೂಜ್ ಚೂಡಿ ಹಾಕಿದ್ದ ಅಸಹಾಯಕಿ ಲೇಡಿ ಕಂಡಕ್ಟರ್ ನೋಡಬೇಕೋ ತಿಳಿಯಲಿಲ್ಲ. ಇಂಥ ಪರಿಸ್ಥಿತಿಯಲ್ಲಿ ನಾವೆಲ್ಲರೂ ಅಸಹಾಯಕರೇ.. ಯಾಕಂದ್ರೆ ಇಂತಹ ಸನ್ನಿವೇಶದಲ್ಲಿ ಅಂತಹ ಕುಡುಕ ಹುಚ್ಚುಮಕ್ಕಳಿಗೆ ಕಡಿವಾಣ ಹಾಕಬೇಕಾಗಿರುವುದು ಯಾರು? ಕುಡಿದು ಸಾರ್ವಜನಿಕ ಸಾರಿಗೆ ಹತ್ತಬಾರದೆಂದೂ ಕಾನೂನೇನಾದರೂ ಇದೆಯೇ?? ಬಸ್ಸಿನಲ್ಲಿ ಗಬ್ಬೆಬ್ಬಿಸುವವರ ವಿರುದ್ದ ದೂರುಕೊಡಬಹುದೇ? ಅಥವಾ ನಿವರ್ಾಹಕರಿಗೆ ಅವರನ್ನು ಬಸ್ಸಿಂದ ಇಳಿಸುವ ಅಧಿಕಾರವಿದೆಯೆ?? ಇಂತಹ ಪರಿಸ್ಥಿತಿಯಲ್ಲಿ ಪುರುಷರಿಗಿಂತಲೂ ಮಾನಸಿಕವಾಗಿ ಬಹಳ ಶéೋಣೆಗೆ ಒಳಗಾಗುತ್ತಿರುವುದು ಮಹಿಳೆಯರು. ಇದಕ್ಕೇನೂ ಕಡಿವಾಣವಿಲ್ಲವೇ??ಮಹಿಳಾ ಪರ ಮಾತನಾಡುವ ಹಲವರಿಗೆ ಇಂತಹ ಚಿಕ್ಕಪುಟ್ಟ ಕಿರಿಕಿರಿಗಳು ಸಮಸ್ಯೆಯೇ ಅಲ್ಲ. ರಾತ್ರಿ ಸಮಯದಲ್ಲಿ ಬಸ್ಸಿನಲ್ಲಿ ಆಗುತ್ತಿರುವ ಈ ಕುಡುಕರ ಹಾವಳಿಗೆ ಮಿತಿಯೇ ಇಲ್ಲ. ಅದೇನೇ ಇರಲಿ ಈ ಸಮಸ್ಯೆಗೆ ಇತ್ಯರ್ಥಕ್ಕೆ ಸಂಬಂಧಪಟ್ಟವರು ಕೊಂಚಗಮನ ಹರಿಸಿ ಮಹಿಳೆಯರ ಈ ಕ್ಲೇಷಕ್ಕೆ ಇತಿಶ್ರೀ ಹಾಡಬೇಕೆಂದು ತೊಂದರೆಗೆ ಒಳಗಾದ, ಒಳಗಾಗುತ್ತಿರುವ ನಗರದ ಸಮಸ್ತ ಮಹಿಳಾಮಣಿಗಳ ಪರವಾಗಿ ಕೇಳಿಕೊಳ್ಳುತ್ತೇನೆ......!

-- ಫ್ಲಾಪಿ ಬಾಯ್


Tuesday, 4 June 2013

               ಜೂನ್ 5 ಎಂಬ ವಿಶ್ವ ಪರಿಸರ (ಕರಕರ) ದಿನ

                ಒಮ್ಮೆ ಸುಮ್ನೆ ಊಹಿಸಿಕೊಳ್ಳಿ, 3030 ಇಸವಿಯದು. ಬ್ಲೂ-ಗ್ರೀನ್ ಕಾಂಬಿನೇಶನ್ ಅಲ್ಲಿದ್ದ ನಮ್ಮ ಭೂಮಿ ಆಗ ಬರೀ ಬೇಡದ ಗ್ಯಾಸ್ಗಳಿಂದ, ಬರೀ ಕೆಂಪು ಮಣ್ಣಿನಿಂದ ಧೂಳಿನಿಂದ ಆವೃತವಾದ ಬಹಳ ವರ್ಷಗಳ ನಂತರ ಕೆಸರಿನಲ್ಲಿ ಸಿಕ್ಕಿದ ಒಣಗಿದ ಮಣ್ಣಿನ ಟೆನ್ನಿಸ್ ಬಾಲ್ ತರ ಇರತ್ತೆ. ಪ್ರಾಣಿಗಳು ಅಂದರೆ ಏನೂ ಅಂತಲೇ ತಿಳಿಯದ ಬೆನ್ನಮೇಲೆ ಕಂಪಲ್ಸರೀ ಆಕ್ಸಿಜನ್ ಸಿಲೆಂಡರ್ ಸಿಕ್ಕಿಸಿಕೊಂಡ ಮಾಸ್ಕಧಾರಿ ಮಾನವರ ಜೀವನ ಇರತ್ತೆ. ಎಲ್ಲಾ ಕಡೆ ಕಾಂಕ್ರೀಟ್ ಕಾಡು ತುಂಬಿದ್ದು ನೆರಳು ಅಂದ್ರೆ, ನೀರಿನ ಮಳೆ ಅಂದ್ರೆ ಏನೂ ಅಂತಲೇ ತಿಳಿಯದ ನಿಮ್ಮ ಮುಂದಿನ ಜನಾಂಗ ಇರತ್ತೆ. ಕಣ್ಣುಗಳೆಲ್ಲಾ ಬರಗೆಟ್ಟು ಕಜಕಿಸ್ತಾನದ ಮರುಭೂಮಿ ತರ ಪಳಪಳ ಅಂತಿರುತ್ತೆ. ಈಗೆಲ್ಲಾ ಯೆರ್ರಾಬಿರ್ರಿ ತಿಂದು ದೈತ್ಯ ದೇಹ ಬೆಳೆಸಿದ ಮಾನವರೆಲ್ಲಾ ಆಗ ಅಂದಿನ ಅಜ್ಞಾನಿಗಳಿಗೆ, ಕ್ಷಮಿಸಿ ವಿಜ್ಞಾನಿಗಳಿಗೆ ಸಂಶೋಧನೆಯ ವಸ್ತುಗಳಾಗಿರುತ್ತೆ. ಎಲ್ಲಾ ಕಡೆ ಬಿಸಿ ಬಿಸಿ ಬಿಸಿ, ಆದರೂ ರೊಮ್ಯಾಂಟಿಕ್ ಹಾಟ್ ಕೆಲಸಗಳಿಗೆ ಅವಕಾಶ ಇಲ್ದೆ, ಬಟ್ಟೆ ಬರೆ ತೆಗಿಯಕ್ಕಾಗದೇ ಮಾನವರು ಮುಂದಿನ ತಮ್ಮ ತಲೆಮಾರು ಬೆಳೆಸಲು ತುಂಬಾನೇ ಕಷ್ಟಪಡಬೇಕಾಗುತ್ತೆ. ಇಂದಿನ ಸುಡಾನ್ ದೇಶದ ಶಕ್ತಿಹೀನ, ಕಳಾಹೀನ, ಮಾಂಸವಿಲ್ಲದ ಬರೀ ಬ್ಲಾಕ್ ಸ್ಕಿನ್ ಲೆಯರ್ಡ್ ಬ್ಯೂಟಿಗಳೇ ವಿಶ್ವದ ಎಲ್ಲಾಕಡೆ ಇದ್ದರೆ ಹೇಗಿರುತ್ತೆ. ಫ್ಯಾಷನ್ ಷೋಗಳಲ್ಲಿ ಮಾಡೆಲ್ಗಳು ಎಕ್ಸಪೋಸಿಗೆ ಅಂತ ಬರೀ ಟ್ರಾನ್ಸಪರೆಂಟ್ ಕೂಲಿಂಗ್ ಡ್ರೆಸ್ ಹಾಕ್ಕೊಂಡು ರ್ಯಾಂಪ್ ಮೇಲೆ ನಡೀತಾ ಇದ್ರೆ ಅದನ್ನು ನೋಡುವ ನಮ್ಮ ಅಂದಿನ ಪ್ರಜೆಗಳ ರಸಿಕ ಕಣ್ಣು, ತಲೆಗಳು  ಎಷ್ಟು ಪಾಪ ಮಾಡಿರಬಹುದು ಅಂತ ಹಾಗೆ ಒಮ್ಮೆ ಯೋಚಿಸಿ. ಇನ್ನೂ ಹೀಗೆ ಮುಂದಿನ ಭವಿಷ್ಯದ ಬಗ್ಗೆ ಹೇಳುತ್ತಾ ಹೋದರೆ ಒದುತ್ತಿರುವ ನಿಮ್ಮ ಕಣ್ಣುಗಳು ಮತ್ತು ತಲೆಯೊಳಗಿನ ಮಿದುಳು ಸೈನೆಡ್ ತಿಂದು ಸೂಸೈಡ್ ಮಾಡಿಕೊಳ್ಳುವ ಸಂಭವವಿದ್ದು ಆದ್ದರಿಂದ ಒಮ್ಮೆ ನಿಮ್ಮ ಊಹಾ ಲೋಕದಿಂದ ಈಗಿನ 2013ಕ್ಕೆ ವಾಪಸ್ ಬನ್ನಿ.
                          ಅಯ್ಯೋ ಆಗ್ಲಿಂದ ಇಷ್ಟೆಲ್ಲಾ ಮಾತಾಡ್ತಾ ಇರೋ ನಾನು ಯಾರು ಅಂತಲೇ ನಿಮಗೆ ಹೇಳಿಲ್ಲ ಅಲ್ವ. ನಾನೊಂದು ಮರ,..!! ಮನುಷ್ಯರೇ ನೀವೇ ನನಗೊಂದು ಏನೇನೋ ಹೆಸರಿಟ್ಟಿದೀರಾ..! ವೈಜ್ಞಾನಿಕ ಹೆಸರಂತೆ, ಆಡುಭಾಷೆಯ ಹೆಸರಂತೆ ಹೀಗೆ, ನನಗೆ ಬಾಯಿ ಇದ್ರೆ ಕೇಳಿ ಕಂಫರ್ಮ್  ಮಾಡ್ಕೋತಾ ಇದ್ದೆ, ಏನು ಮಾಡದು? ಗಾಡು ನಂಗೆ ಯೋಚಿಸುವ ಮನಸ್ಸು ಕೊಟ್ಟ ಆದರೆ ಬಾಯೇ ಕೊಟ್ಟಿಲ್ಲ ನಾನು ಕಳೆದ ಸುಮಾರು 2000ವರ್ಷಗಳಿಂದ ಇಲ್ಲೇ ನಿಮ್ಮ ಸ್ಯಾಂಕಿಟ್ಯಾಂಕಿಯ ದಿಬ್ಬದ ಮೇಲೆ ಒಂಟಿಕಾಲಲ್ಲಿ ಬೇರು ಬಿಟ್ಟುಕೊಂಡು ನಿಂತಿದ್ದಿನಿ. ನಿಮ್ಮ ಜನಾಂಗದ ಎಷ್ಟೆಷ್ಟೋ ಜನರನ್ನ ನೋಡಿ ಬಿಟ್ಟಿದೀನಿ. ಆಗೆಲ್ಲ ನಾನು ನೋಡುವಷ್ಟು ದೂರವೂ ನಮ್ಮ ವಂಶಜರೇ ಇಲ್ಲೆಲ್ಲಾ  ಕಾಣಸಿಗುತ್ತಿದ್ದರು. ದುರಂತ ನೋಡಿ ಈಗ ಇಲ್ಲಿ ನಾನೊಬ್ಬಳೆ ಜಂಟಿಯಿಲ್ಲದೆ ಒಂಟಿಯಾಗಿ ಆಗಾಗ ಮನುಷ್ಯರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಕೊಡಲಿ ಏಟು ತಿಂದು ಅರೆಜೀವವಾಗಿ ಸಲದ ಮಳೆಗಾಲದ ಜೋರುಮಳೆಗೆ ಬುಡಸಮೇತ ಬೀಳುವ ದಿನಕ್ಕೆ ಎದುರು ನೋಡ್ತಾ ಇದೀನಿ. ಆಗಿನ ಕಾಲ ನಮ್ಮ ವಿಜೃಂಭಣೆಯ ಉತ್ತುಂಗದ ಕಾಲವದು. ಎಲ್ಲೆಲ್ಲೂ ನಮ್ಮವರೇ.! ಹಚ್ಚಹಸಿರು ಪರಿಸರ, ಪ್ರಾಣಿಪಕ್ಷಿಗಳ ಜೊತೆ ನಮ್ಮ ಅನ್ಯೋನ್ಯ ಜೀವನ, ಜೊತೆಗೆ ಆಗಾಗ ಸೀಜನ್ನಿಗೆ ಸರಿಯಾಗಿ ಬೀಳುತ್ತಿದ್ದ ದಂಡಿ ದಂಡಿ ಮಳೇ, ಜೊತೆಗೆ ಎಲ್ಲರಿಗೂ ಉಪಯೋಗಕಾರಿಯಾಗಿ ಜೀವಿಸುತ್ತಿದ್ದ ನಮ್ಮ ವಂಶಜರು, ಈಗ ಬರೀ ನನ್ನ ನೆನಪಷ್ಟೇ..!! ನಾನೂ ಈಗಲೋ ಆಗಲೋ ಅನ್ನುತ್ತಾ ದಿನ ಎಣಿಸುತ್ತಾ ಇದ್ದರೂ ನಮ್ಮ ಕಣ್ಣು ಮುಂದೆಯೇ ಬೆಳೆದು ನಮ್ಮ ಬುಡಕ್ಕೇ ಪರಶುರಾಮನ ಆಯುಧವಿಟ್ಟ ಮನುಷ್ಯರ ಬಗ್ಗೆ ನನಗೆ ಸಿಟ್ಟಿಲ್ಲ, ನಮ್ಮ ಒಡನಾಡಿಯಾಗಿದ್ದ ಜಲ ಪರಿಸರ ಇವನ್ನೆಲ್ಲಾ ಹಾಳುಮಾಡಿದ ಹಾಳುಮಾಡುತ್ತಿರುವ ಬಗ್ಗೆ ಆಕ್ರೋಶವಿಲ್ಲ,, ಬದಲಾಗಿ ಅನುಕಂಪವಿದೆ. ರಿಯಲೀ ಪಿಟಿಯು..!! :(
                            ಅದೇನೋ ವರ್ಷವರ್ಷ ಮನುಜರು ನಮ್ಮ ದಿನ ಅಂತ ಜೂನ್ 5ಕ್ಕೆ ಪರಿಸರ ದಿನ ಆಚರಿಸುತ್ತಾರೆ. ಪ್ರಶಸ್ತಿಗಾಗೋ, ಪ್ರತಿಷ್ಠೆಗಾಗೋ ಎಲ್ಲಾ ಕಡೆಯಿಂದಲೂ ಹುಡುಕಿ ತಡಕಿ ಒಂದಿಷ್ಟು ನಮ್ಮ ಪೀಳಿಘೆಯ ಸಸಿಗಳನ್ನು ತಂದು ನೆಡುತ್ತಾರೆ. ಜೋರು ಭಾಷಣ, ಚಪ್ಪಾಳೆಯ ರಿಂಗಣ. ಸಿಹಿ ಹಂಚಿಕೊಂಡು ನಂತರ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಮಕಾ ಮುಚ್ಚಿಕೊಂಡು ಎಲ್ಲೆಲ್ಲೋ ಚದುರಿಹೋಗುತ್ತಿರುವುದನ್ನ ನಾನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇನೆ. ಎಲ್ಲರಿಗೂ ನಮ್ಮ ಬಗ್ಗೆ ಕಳಕಳಿಯಿದೆ. ಆದರೆ ಸಮಯದ್ದೇ ಸಮಸ್ಯೆ ಅಂತೆ, ಮೇಲಾಗಿ ಎನೇನೋ ಕಾರಣಗಳಿಗಾಗಿ ನಮ್ಮನ್ನೆಲ್ಲಾ ಕಡಿಯುವುದು ಅನಿವಾರ್ಯವಂತೆ. ನಮ್ಮನ್ನು ಕಡಿಯುವುದರ ಬಗ್ಗೆ ಆಕ್ಷೇಪವಿಲ್ಲ. ಇದರಿಂದ ಅವರ ಜೀವನಕ್ಕೇ ಅವರೇ ಕೊಕ್ಕೆ ಹಾಕಿಕೊಳ್ಳುವುದ ನೋಡಿದರೆ ನಿಜಕ್ಕೂ ನನಗೆ ಖೇದವಾಗುತ್ತಿದೆ. ನನ್ನ ಪ್ರಶ್ನೆ ಇಷ್ಟೇ, ಪರಿಸರ ದಿನವೇಕೇ ಒಂದೇ ದಿನಕ್ಕೆ ಸೀಮಿತವಾಗಿರುವುದು? ಎಲ್ಲೋ ಮಾಡುವ ಬರೀ ಭಾಷಣಗಳಿಂದ, ಅಲ್ಲೇಲ್ಲೋ ಮೂಲೆಯಲ್ಲಿ ಕೂತು ನೀವು ಬರೆವ ಲೇಖನಗಳಿಂದ ಪರಿಸರ ಸುಧಾರಣೆ ಎಷ್ಟರ ಮಟ್ಟಿಗೆ ಇಲ್ಲಿಯವರೆಗೆ ಸಾಧ್ಯವಾಗಿದೆ?? ನಮ್ಮಂತ ಮರಗಳ ಮಾರಣಹೋಮ ಏಕೆ ಇನ್ನೂ ನಿಂತಿಲ್ಲ.??? ಬುದ್ದಿಜೀವಿ ಅನ್ನಿಸಿಕೊಂಡು ಏನೇನೋ ಮಾಡುವ, ಸಾಧಿಸುವ ಮನುಷ್ಯರೇ ಹೀಗಾಡುತ್ತಿರುವುದು ನಿಜವಾಗಿಯೂ ದುರಂತವೇ ಸರಿ.!! ಅವರ ಅವಸಾನ ಅವರ ಕೈಯಲ್ಲೇ ಇದ್ದರೂ ಅರಿಯದ ಮೂರ್ಖರಾದರೇನೋ ಅನ್ನುವ ದಿಗಿಲು ನನಗೆ ಕಾಡಲಾರಂಭಿಸಿದೆ. ನನಗೆ ಬಾಯಿಯಿಲ್ಲ, ನನ್ನ ಕಷ್ಟಗಳು ಹೀಗೇ, ಬರೀ ಯೋಚಿಸಿ ಯೋಚಿಸಿ ಒಮ್ಮೊಮ್ಮೆ ಗೊಳೋ ಎಂದು ಗೋಳಾಡಿ ನನ್ನ ಕೋನೆ ದಿನಗಳನ್ನು ಎಣಿಸುತ್ತಿರುವೆ. ಈಗಲೂ ಕಾಲ ಮೀರಿಲ್ಲ, ಸರಿಯಾದ ದಿಸೆಯಲ್ಲಿ ಮುನ್ನುಗ್ಗಿ ಪರಿಸರ ರಕ್ಷಣೆಯ ಹೊಣೆ ಹೊತ್ತ ಮನುಜರು ನಿಷ್ಕಲ್ಮಶವಾಗಿ ಅವರ ಜವಾಬ್ದಾರಿ ನಿಭಾಯಿಸಿದರೆ ಅವರೂ ಅವರ ಮುಂದಿನ ಮಕ್ಕಳೂ, ನಮ್ಮ ಪರಿಸರವೂ ಮತ್ತೆ ಅನ್ಯೋನ್ಯವಾಗಿ ಜೀವಿಸುವಂತಾಗಲಿ ಎಂದು ನಾನು ನೊಂದ ಹೃದಯದಿಂದ ಬಯಸುತ್ತಿದ್ದೇನೆ.
                             ಮತ್ತೊಮ್ಮೆ ಇಂದು ಇಂದು ಜೂನ್ 5 ವಿಶ್ವ ಪರಿಸರ ದಿನ ಬಂದಿದೆ. ತರಾರುರಿಯಲ್ಲಿ ಹೇಗೋ ಏನೋ ಕರಕರವೆಂದು ಆಚರಿಸುವ ಬದಲು, ನೂರು ಹೊಸ ಸಸಿಗಳನ್ನು ನೆಟ್ಟು ನಂತರದ ನಿನಗಳಲ್ಲಿ ಅದನ್ನ ಒಣಗಿಸುವುದ ಬಿಟ್ಟು, ನೆಡುವ ಹತ್ತೇ ಸಸಿಯಾಗಿದ್ದರೂ ಅದು ಬೆಳೆಯುವಂತೆ ನೋಡಿಕೊಳ್ಳಿ, ಮರ ಕಡಿಯುವ ಬದಲು ಬೇರೆ ಪರ್ಯಾಯ  ಮಾರ್ಗವನ್ನು ಅರಸಿಕೊಳ್ಳಿ ಇದೇ ನೀವು ಪರಿಸರ ದಿನದಂದು ನೀವು ನನಗೆ ಕೊಡಬಹುದಾದ, ನಾನು ಬಯಸುವ ಉಡುಗೊರೆ..!! 


Monday, 3 June 2013

http://www.panjumagazine.com/?p=2575

ಪಂಜುಲಿ ಪ್ರಕಟವಾದ ಲೇಖನ  

ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!!
ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ ಪರಿ ರೋಚ್ಚಿಗೆದ್ದಿರೋದು? ಸ್ವಲ್ಪ ನಂಗೂ ಹೇಳಿ ನಾನೂ ಬರುವೆ ನಿಮ್ಮ ಜೊತೆ" ಅಂತ ಸುಮ್ನೆ ಅಂದೆ ಅಷ್ಟೆ..!
"ಅದೇ ಕಣ್ರೀ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದಾರೆ ಈ **ಮಕ್ಳು, ದುಡ್ಡು ತಗೊಂಡು, ಇಡೀ ದೇಶದವರಿಗೇ ಮೋಸ ಮಾಡಿಬಿಟ್ರು. ಇವರ ಮೇಲೇ ನಂಬಿಕೆ ಇಟ್ಟು ಆರಾಧಿಸುತ್ತಿದ್ದ ನಮ್ಮಂತ ಅಸಂಖ್ಯಾತ ಅಭಿಮಾನಿಗಳಿಗೆ ನಂಬಿಕೆ ದ್ರೋಹ ಮಾಡಿಬಿಟ್ರು ಇವರು. ಇವರನ್ನ ಸುಮ್ನೇ ಬಿಡಬಾರದು. ಇವರಿಗೆ ಉಗ್ರ ಶಿಕ್ಷೆಯಾಗಬೇಕು, ನೀನೂ ಬಾ, ಈ ಫೋಟೋಗೆ ಒಂದೆರಡು ಏಟು ಹಾಕ್ತಾ ಇರು, ಅಷ್ಟರಲ್ಲಿ ಟೀವೀಯವರು, ಪೇಪರ್‍ನವರು ಎಲ್ರೂ ಬರ್ತಾರೆ ಆಮೇಲೆ ಒಂದು ನಾಕು ಮಾತಾಡಿ, ಇವತ್ತಿನ ಪ್ರತಿಭಟನೆ ಮುಗಿಸೋಣ" ಅಂತ ಅಂದ ಹಳೇ ದೋಸ್ತನ ತರಾ.
ನಾನಂದೆ "ಸರಿ ಆದ್ರೆ ನಾನಿನ್ನು ಅಮಾಯಕ ಇದರ ಬಗ್ಗೆ ಜಾಸ್ತಿ ತಿಳಿಸಿ ಸಾರ್, ಕೆಲ ಸಂದೇಹಗಳಿವೆ ನೀವು ಪರಿಹರಿಸಬೇಕು.. ಹಂಗಾದ್ರೇ ನಾನೂ ಒಂದಿಷ್ಟು ಹುಡುಗರನ್ನ ಗುಡ್ಡೆ ಹಾಕ್ಕಂಡು ಬರ್ತೀನಿ ಎಲ್ರೂ ಸೇರಿ ನಿಮ್ಮ ಅಧ್ಯಕ್ಷತೆಯಲ್ಲಿ ಜೋರಾಗಿ ಪ್ರತಿಭಟನೆ ಮಾಡುವ, ಹಾಗೇ ಕೆಲ ರಿಪೋರ್ಟರ್ಸ ಕೂಡಾ ಗೊತ್ತು ಅವರನ್ನೂ ಬರಕ್ಕೆ ಹೇಳ್ತೀನಿ, ಒಂದೊಳ್ಳೆ ಕೆಲಸಾನ ಜೋರಾಗಿ ಮಾಡುವ" ಹೀಗೆ ಹೇಳುತ್ತಿದ್ದಂತೆ,
ಇನ್ನೊಬ್ಬ ಉಂಡಾಡಿ ಗುಂಡನ ತರ ಇದ್ದ ಯಾರೋ ಇಂಟರೆಸ್ಟ ಸನ್ ಮುಂದೆ ಬಂದು ಹೇಳಿದ, " ಬಾರೋ ತಮಾ, ನಾನೇ ಈ ಪ್ರೊಟೆಸ್ಟಗೆ ಹೆಡ್ಡು, ಕೇಳು ಏನ್ ನಿನ್ ಡೌಟು?"
ನಾನಂದೆ "ಏನಿಲ್ಲ ಸರ್, ಆ ಲೀಗ್ ಮ್ಯಾಚಲ್ಲಿ ಯಾರೋ ದುಡ್ಡಿಸ್ಕೊಂಡು ಫಿಕ್ಸ ಮಾಡ್ಕೊಂಡು ಆಡಿದ್ರೆ ಅವರು ಆ ಫ್ರಾಂಚೈಸಿಗೆ ಮೋಸ ಮಾಡಿದ ಹಾಗಲ್ಲವಾ? ಅವರು ನಮಗೆ ಹೇಗೆ ಮೋಸ ಮಾಡಿದರು? ಅವರು ಗೆದ್ರೂ ಸೋತ್ರೂ ನಮಗೇನು ಸಿಗತ್ತೆ?"
"ಇಲ್ಲಿ ನಂಬಿಕೆ ಮುಖ್ಯ.. ನಾವು ಆ ಟೀಮ್ ಸಪೋರ್ಟರ್ ಆಗಿದ್ದು, ನಮ್ಮ ಕೆಲಸ ಕಾರ್ಯ ಎಲ್ಲ ಬಿಟ್ಟು ಕ್ರಿಕೇಟೇ ನಮ್ಮ ಧರ್ಮ ಅಂದುಕೊಂಡು ಮ್ಯಾಚ್ ನೋಡ್ತಾ ಇರ್ತೀವಿ, ಅವಾಗವಾಗ ಸುಮ್ನೇ ವಿನೋದಕ್ಕಾಗಿ ಪ್ರೆಂಡ್ಸ ಹತ್ರ ಬೆಟ್ಟಿಂಗ್ ಸಹಾ ಕಟ್ಟಿರುತ್ತೀವಿ. ಈ ನನ್ನ್ ಮಕ್ಳು ಹೀಗೆ ಮಾಡೋದ್ರಿಂದ, ಗೆಲ್ಲೊ ಮ್ಯಾಚ್ ಸೋಲೋದ್ರಿಂದ ಬೆಟ್ಟಿಂಗ್ ಕಟ್ಟಿದ ಎಷ್ಟು ಜನಾ ಬೀದಿಗೆ ಬರ್ತಾರೆ ಗೊತ್ತಾ? ಯಾರಿಗೂ ಇದರ ಬಗ್ಗೆ ಕೇರ್ ಇಲ್ಲ. ಇಂದು ಅವರ ಟೀಮಿಗೆ ಮೋಸ ಮಾಡಿದೋರು ನಾಳೆ ಇದೇ ದುಡ್ಡಿಗೋಸ್ಕರ ನಮ್ಮ ದೇಶಕ್ಕೆ ಮೋಸ ಮಾಡೋಲ್ಲ ಅಂತ ಏನು ಗ್ಯಾರಂಟಿ? ಅದಿಕ್ಕೆ ನಾವು ಪ್ರತಿಭಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ, ಮುಂದೆ ಈ ತರ ಎಲ್ಲೂ ಆಗದೇ ಇರಲಿ, ತಪ್ಪು ಮಾಡಿದವರಿಗೆ ಉಗ್ರ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಉದ್ದೇಶ" ಅಂತ ಅಂದ.
"ವ್ಹಾವ್ !! ಸೂಪರ್ ಸರ್ ನೀವು, ನಿಮ್ಮಂತವರು ಬೇಕು ನಮ್ ಸಮಾಜಕ್ಕೆ, ಅದಿರ್ಲಿ ಈಗ ಇದು ಬೆಟ್ಟಿಂಗ್ ಪರವಾಗಿ ಫಿಕ್ಸಿಂಗ್ ವಿರುದ್ದವಾಗಿ ಇದು ನಿಮ್ಮ ಪ್ರತಿಭಟನೇಯೋ ಹೇಗೆ? ಫಿಕ್ಸಿಂಗ್ ಈಗ ಟ್ರೆಂಡು, ರಾಜಕಾರಣೀಗಳ ಕ್ಷೇತ್ರದಿಂದ ಹಿಡಿದು ಗೋಲಿ ಆಡೋ ಮಕ್ಕಳವರೆಗೂ ಈಗ ಎಲ್ರೂ ಫಿಕ್ಸ್ ಆಗೇ ಇರ್ತಾರೆ. ಕಸೀನೋ ರಾಯಲ್‍ನಿಂದ ಪಾಯಿಕಾನೆ ಮನೆವರೆಗೂ ಎಲ್ಲರೂ ಫಿಕ್ಸು, ಎಲ್ಲವೂ ಫಿಕ್ಸು. ಮೊದಲೆಲ್ಲಾ ಪ್ರೇಮಿಗಳ ಬಾಯಲ್ಲಿ ಮಾತ್ರಾ ಕೇಳ್ತಾ ಇದ್ದ ಈ ಸ್ಪಾಟ್ ಫಿಕ್ಸ್, ಡೇಟ್ ಫಿಕ್ಸ್, ಇಂದು ಚೆಡ್ಡಿ ಹಾಕೋ ಹುಡುಗಂಗೂ ಚಾಕಲೇಟ್ ಆಮಿಷ ತೋರಿಸಿ ಫಿಕ್ಸ್ ಮಾಡಬೇಕಾದ ಪರಿಸ್ಥಿತಿ ಇದೆ. ಫಿಕ್ಸ್ ಇಲ್ಲದೇ ಸಕ್ಸಸ್ ಇಲ್ಲ ಅಂತಾ ಎಲ್ಲರೂ ತಿಳ್ಕೊಂಬಿಟ್ಟಿದ್ದಾರೆ. ಈಗ ಹೇಳಿ ಈ ಪ್ರತಿಭಟನೆ ಜೊತೆಗೆ ಬೆಟ್ಟಿಂಗನ್ನೂ ಕೂಡಾ ರಾಷ್ಟ್ರೀಕರಣ ಮಾಡಿ, ಡರ್ಬೀ ರೇಸ್ ತರಾ ಒಪನ್ ಬೆಟ್ಟಿಂಗಿಗೆ ಮನವಿ ನೀಡೋಣವಾ? ಅದರಿಂದ ಕೆಲವು ಮಾಮಂದಿರಿಗೆ ಅವಾಗವಾಗ ಕೊಡಬೇಕಾದ ಮಾಮೂಲಿಯಾದ್ರೂ ಉಳಿಯತ್ತೆ, ಹೆದರಿಕೊಂಡು ಬೆಟ್ಟಿಂಗ್ ಆಡಿ ಬೀದಿಗೆ ಬೀಳೋ ಬದಲು ರಾಜಾರೋಷವಾಗಿ ಮೊರಿ ಸೇರೋಣ, ಏನಂತೀರಾ?" ಎಂದೆ ಅವನನ್ನು ಲಾಕ್ ಮಾಡುವ ಉದ್ದೇಶದಿಂದ.
"ಅಯ್ಯೋ ಬೆಟ್ಟಿಂಗ್ ವಿಷ್ಯ ಬೇಡಾ ಮಾರಾಯ, ಫಿಕ್ಸಿಂಗ್ ಬಗ್ಗೆ ಅಷ್ಟೆ ನಾವು ಮಾತಾಡುವ, ಏನೋ ಸ್ವಲ್ಪ ಪೇಪರು, ಟೀವಿಲಿ ನಮ್ ಮುಕ ತೋರಿಸಿ, ಸ್ವಲ್ವ ಹೆಸರು ಗಿಸರು ಮಾಡ್ಕಂಡು ಮುಂದೆ ರಾಜಕೀಯಕ್ಕೆ ಧುಮುಕಿ ಒಳ್ಳೆ ಆಡಳಿತ ಕೊಟ್ಟು ಜನರ ಸೇವೆ ಮಾಡುವ ಅಂತಿದ್ರೆ ನೀ ದಾರಿ ತಪ್ಪಿಸುವ ಮಾತಾಡಿ ನಮಗೂ ಕಂಫ್ಯೂಜ್ ಮಾಡಿಸಿ ತಲೇಲಿ ಹುಳಾ ಬಿಟ್ಟಿರೋ ನಿನ್ನ ಹೆಸರೇನಯ್ಯಾ?" ಅಂತ ಅಂದ ವಿಚಿತ್ರವಾಗಿ.
"ಸುಮ್ನೇ ಇರೀ ಸರ್ ನನ್ನ್ ಹೆಸರು ಕೇಳಿದ್ರೆ ನಿಮ್ ಕಿವಿಯಿಂದ ಕಂಬಳಿಹುಳ ಬುದುಬುದು ಅಂತಾ ಉದುರೋ ಸಂಭವ ಇದೆ. ನೀವ್ ಕಂಟಿನ್ಯೂ ಮಾಡಿ ನಿಮ್ಮ ಚಪ್ಪಲಿ ಬಡಿಯೋ ಕೆಲಸಾನ, ನಮ್ಮ ಜನಗಳ ಮೈಂಡೇ ಸರಿಯಾಗಿ ತಲೆಯೊಳಗೆ ಫಿಕ್ಸ್ ಆಗಿದೆಯೋ ಇಲ್ವೋ ಅಂತ ಡೌಟ್ ಇದೆ ನಂಗೆ, ಇದು ಬೇರೇನ? ಜೀವನದಲ್ಲಿ ಹಾಳಾಗೋಕೂ ಬಲವಾದ ಕಾಂಪಿಟೇಶನ್ ಇದೆ ನಮ್ಮಲ್ಲಿ. ಆಟಗಾರರ ಮ್ಯಾಚ್ ಫಿಕ್ಸಿಂಗಿಗೆ ನಾವೇ ಕಾರಣ, ನಮ್ಮ ಅತಿಯಾದ ಪ್ರೀತೀ ಮತ್ತು ನಂಬಿಕೆಯೇ ಕಾರಣ ಅಂದರೂ ತಪ್ಪಾಗಲ್ಲ..! ಕೆಲ ದಿನ ಈಷಾರಾಮಿ ಜೈಲಲ್ಲಿದ್ದು, ಕೆಲದಿನ ಮಾನ ಹೋದರೂ ಇರೋ ದುಡ್ಡಿನ ಮುಂದೆ ಎಲ್ಲವೂ ಗೌಣ. ಸುಮ್ನೆ ನಾವು ನೀವು ಇಲ್ಲಿ ಚಚ್ಚಿಕೊಳ್ಳೊದ್ರಿಂದ ಏನು ಬದಲಾವಣೆಯೂ ಆಗೊಲ್ಲ, ಯಾಕಂದ್ರೆ ಪ್ಯಾಂಟ್ ಎಷ್ಟೇ ಅಗಲ ಇದ್ರೂ, ಬ್ರಾಂಡ್ ಯಾವುದೇ ಆಗಿದ್ರೂ, ಕಲರ್ ಎಷ್ಟೇ ಮಿಕ್ಸ ಇದ್ರೂ ಜಿಪ್ ಇದ್ಮೇಲೆ ಅದು ಯಾವ ಜಾಗದಲ್ಲಿ ಇರಬೇಕೋ ಅಲ್ಲೇ ಇದ್ರೆ ಉತ್ತಮ. ನನಗೆ ಗೊತ್ತು ನಿಮ್ಗೆ ಅರ್ಥ ಆಗಿರಲ್ಲ ಅಂತಾ, ಅರ್ಥ ಆದ್ರೂ ನಿಮಗೆ ಹೇಳಿಕೊಳ್ಳಕ್ಕೆ ಆಗೊಲ್ಲ ಅನ್ನೋದು ಗೊತ್ತು, ನಾನಿನ್ನು ಬರ್ಲಾ ಸರ್, ಚೊಂಬಾದ ಜೀವನದಲ್ಲಿ ಒಂದು ಬಕೀಟು ಕೊಡಿಸಪ್ಪಾ ದೇವರೇ..!!" ಅಂತಾ ನಾಟಕೀಯವಾಗಿ ಕೈಮುಗಿದು ಕೆಲಸ ಇಲ್ಲದ ಈ ನನ್ನ ಮಕ್ಕಳಿಗೆ ಹುಳ ಬಿಟ್ಟಿರೋ ಖುಷೀಲಿ ಮನೆಕಡೆ ಹೊಂಟೆ..!!

Wednesday, 22 May 2013


ಫ್ಲಾಪೀ ಬಾಯ್ ಕಂಡ ಕೆಂಪುತೋಟ

      ಈ ಫ್ಲಾಪೀ ಬಾಯ್ ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್ ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ....


      ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು ಅಂತ ಆ ದೇವರಿಗೇ ಗೊತ್ತು. ಯಾಕೆಂದರೆ ಒಳಗೆ ಹೋಗಿದ್ದೇ ಹೊರಬರಬೇಕೆನ್ನುವ ನಿಯಮವೇನಿಲ್ಲವಲ್ಲ. ಲಾಲ್ ಬಾಗ್ ನ ನಾಲ್ಕೂ ದ್ವಾರಗಳನ್ನ ಅಳೆದೂ ತೂಗಿ ಅಲೆದು ಅಲೆದು ಅವನ ಕಣ್ಣಿನ ಕ್ಯಾಮರಾದಲ್ಲಿ ಅನೇಕ ಚಿತ್ರಗಳು ಸೆರೆಯಾಗಿದ್ದವು. 240 ಎಕರೆ ಪ್ರದೇಶವನ್ನೆಲ್ಲಾ ಸುತ್ತಿ ಸುತ್ತಿ ಅವನ ಕಾಲುಗಳು ಪದ ಹಾಡುತ್ತಿದ್ದವು. ಅಲ್ಲಿರುವ ಅಪರೂಪದ ವನಸಪ್ಪತಿಗಳೂ ಅವನಿಗೆ ಕುಶಿ ಕೊಟ್ಟಂತೆ ತೋರಲಿಲ್ಲ. ಗಾಜಿನ ಮನೆ, ಹಚ್ಚ ಹಸಿರಿನ ಹುಲ್ಲುಹಾಸು, ಹೂವಿನ ದಿಬ್ಬ, ಮತ್ಸ್ಯಾಗಾರ ಯಾವುದೂ ನಮ್ಮ ಮಲೆನಾಡಿನ ಹುಡುಗ ಫ್ಲಾಪೀಬಾಯ್ ಗೆ ನೆಮ್ಮದಿ ತರಲಿಲ್ಲ. ಕಾರಣ ಮತ್ತೆ ಆ ದೇವನೇ ಬಲ್ಲ.

       ಸಮಯ ಕಳೆಯುತ್ತಿದ್ದಂತೆ ಮೊಘಲ್ ಶೈಲಿಯ ಆ ಕೆಂಪು ಉದ್ಯಾನದಲ್ಲಿ ಕೊನೆಕೊನೆಗೆ ಕಂಡದ್ದು ಫಾರಿನ್ ಕಲ್ಚರ್. ಹುಡುಗ ಹುಡುಗಿಯರ ಜೋಡಿ ಓಡಾಟ, ಮಕ್ಕಳ ಆಟ-ಕಿತ್ತಾಟ, ಕೆಲವರಿಗೆ ಜನರಿಂದ ಹಣ ಸುಲಿಯುವ ಪಾಠ ಮತ್ತು ಹಲವರಿಗೆ ಸಮಯ ಕಳೆಯಲು ಒಂದು ನೆಮ್ಮದಿಯ ಕೂಟ. ಸೂಕ್ಷ್ಮವಾಗಿ ಗಮನಿಸಿದಾಗ ಅವನಿಗೆ ಕಂಡಿದ್ದು ಇಷ್ಟು. ಮಂಗಗಳು ಜನರಿಗಿಂತ ಹೆಚ್ಚು ನೆಮ್ಮದಿಯಿಂದ ಇವೆ ಈ ಕೆಂಪುತೋಟದಲ್ಲಿ. ಯಾಕೆಂದರೆ ಅವಕ್ಕೆ ಮಾತು ಬರಲ್ಲ ಮತ್ತು ಕಟ್ಟುಪಾಡುಗಳಿಲ್ಲ. ನಮ್ಮ ಹಳೇ ಸಿ.ಎಂ ಹೇಳಿದ್ದು ನಿಜಾ. ಬೆಂಗಳೂರು ಸಿಂಗಾಪುರ ಆಗಿದೆ. ಯಾಕೆಂದರೆ. ಅತ್ಯಾಧುನಿಕ ತಂತ್ರಜ್ಞಾನದ ಬಗ್ಗೆ ಹೊರತುಪಡಿಸಿ ನಮ್ಮ ಜೀವನಶೈಲಿಯಲ್ಲಿ ನಾವೂ ಸಿಂಗಾಪುರವನ್ನು ಹಿಂದಿಕ್ಕಿದ್ದೇವೆ. ಇದರ ಏಲ್ಲಾ ಶ್ರೇಯಸ್ಸು ನಮ್ಮ ಯುವ ಯೂಥ್ಸ್ ಗೆ ಸಲ್ಲಲೇಬೇಕು. ಅಲ್ಲಿ ಪಬ್ಲಿಕ್ನಲ್ಲಿಯೇ ನಡಿತಿತ್ತು ಅವರ ರೋಮಾನ್ಸು, ತಲೆಕೆಡಿಸ್ಕೋಬೇಡಿ ಎಚ್ಚರ ತಪ್ಪಿದರೆ ಅವರೇ ಸೇರ್ಕೋತಾರೆ ಬಿಡಿ ನಿಮಾನ್ಸು... !

          ಯಾವ್ದಕ್ಕೂ ಒಬ್ರೋ, ಇಬ್ರೋ ಅಂತಾ ಲೆಕ್ಕಹಾಕೋಣ ಅಂತಂದ್ರೆ ಅಲ್ಲಿ ನಮ್ಮ ಫ್ಲಾಪೀಬಾಯ್ ಗೆ ಕಂಡೋರೆಲ್ಲ ಅಂತವರೇ. ಕೆಲ ಹುಡುಗಿಯರು ಚಡ್ಡಿ ಹಾಕ್ಕಂಡು ಅವರವರ ಬಾಯ್ ಪ್ರೆಂಡ್ ಅಂತಾ ಹೇಳ್ಕೋತಾ ಅಂಟಿಕೊಂಡು ನಿಂತಿದ್ರೆ, ಹಲವರು ಕೆಳಗಡೆ ಜೀನ್ಸ್ ಪ್ಯಾಂಟು, ಮೇಲ್ಗಡೆ ಡೀಪ್ ನೆಕ್, ಸ್ಲೀವ್ ಲೆಸ್ ಅಂಗೀ ತರ ಇದ್ದ ಎಂಥದೋ ಒಂದು ಸಿಕ್ಕಿಸಿಕೊಂಡು ಎಕ್ಸಪೋಸ್ ಮಾಡಿಕೊಂಡು ಕುಂತಿದ್ರು. ಇವರ ಸಾವಾಸಲ್ಲ ಅಂತಾ ಹುಡುಗ್ರನ್ನ ನೋಡಿದ್ರೆ ಅವರದ್ದು ಇನ್ನೊಂತರ. ಒಬ್ಬ ನರಪೇತಲ ಆಸಾಮಿ ಕಿವಿಗೆ ಹುಬ್ಬಿನ ಮೇಲೇ ಎಲ್ಲಾ ರಿಂಗ್ ಸಿಕ್ಕಿಸಿಕೊಂಡು ಒಳ್ಳೇ ಪೆಕರನ ತರಾ ಒಬ್ಬಳಿಗೆ ಅಂಟಿಕೊಂಡು ನಡೀತಾ ಇದ್ರೆ, ಅಲ್ಯಾರೋ ಮತ್ತೊಬ್ಬ ಇಲ್ದೇ ಇರೋ ಬಾಡಿಮೇಲೆ ಊರಗಲ ಮಚ್ಚೇ ತರ ಹಚ್ಚೇ ಹಾಕಿಸ್ಕೊಂಡು, ಅದೇನೋ ಟ್ರೆಂಡ್ ಅಂತೇ ಅದಿಕ್ಕೆ ನೆಲನೋಡ್ತಾ ಇದ್ದ ಅರ್ದಂಬರ್ದ ಪ್ಯಾಂಟ್ ನ ಸಿಕ್ಕಿಸಿಕೊಂಡು ಹೀರೋ ತರ ಹೋಗ್ತಾ ಇದ್ದ ಕಾಲ್ ಕಿಸ್ಕೊಂಡು...!! ಅಲ್ಲಿನ ಕಲ್ಲು ಬೆಂಚುಗಳೆಲ್ಲಾ ಇಂತಹ ಹೆಂಚುಗಳಿಂದಲೇ ತುಂಬಿ ತುಳುಕಾಡುತ್ತಿತ್ತು. ಕೆಲವರಿಗೆ ಪ್ರಪಂಚದ ಪರಿಜ್ಞಾನವಿಲ್ಲದೇ ಅಲ್ಲೇ ಚುಂಬನಗಳಿಂದಲೇ ಗಗನಚುಂಬಿ ಪರ್ವತಗಳನ್ನು ನಿರ್ಮಿಸುವುದರಲ್ಲಿ ತಲ್ಲೀನರಾಗಿದ್ದರು. ಸಮಯ ಸರಿಯುತ್ತಿದ್ದಂತೇ ಈ ತರಹ ಕಿಸಮುಸ ಮಾಡುವವರ ಸಂಖ್ಯೇ ಹೆಚ್ಚಾಗುತ್ತಿರುವಂತೇ ಅನ್ನಿಸಹತ್ತಿತು ಫ್ಲಾಪೀ ಬಾಯ್ ಗೆ. ಪಕ್ಕದ ಹುತ್ತದ ಬಳಿಯಿಂದ ಹಿಡಿದು ದೂರದ ಪೊಟರೆಯ ಒಳಗೂ ಜೋಡಿಗಳದ್ದೇ ಝೆಂಕಾರ. ಆಗ ಫ್ಲಾಪಿಗೆ ಮನದಟ್ಟಾಯಿತು, ನಮ್ಮ ದೇಶ 'ಭಾರ'ತ ದ ಭಾರೀ ಜನಸಂಖ್ಯೆಯ ಮಹತ್ವ. ಆದರೆ ಇದಕ್ಕೆ ಪರೋಕ್ಷ ಕಾರಣ ಯಾರ್ಯಾರು ಅಂತಾ ಇನ್ನೊಮ್ಮೆ ಯಾವಾಗಾದರೂ ತನಿಖೆ ನಡೆಸಿದರಾಯ್ತೆಂದು ಸುಮ್ಮನಾದ.

              ದಶಕಗಳ ಕಾಲದಿಂದಲೂ ಇರುವ ದೈತ್ಯ ಆಲದ ಮರಗಳನ್ನು ಎಂದು ಫ್ಲಾಪೀಬಾಯ್ ಬೋನ್ಸಾಯ್ ಹೆಸರಿನಲ್ಲಿ ಪಾಟಿನಲ್ಲಿ ನೋಡಿದನೋ ಅಂದೇ ಅವನಿಗೆ ಕಾಲ ಬದಲಾಗುತ್ತಿದೆ ಎಂದು ಅರಿವಾಗತೊಡಗಿತು. ಇದೇ ರೀತಿ ಮುಂದುವರೆದರೆ ಸಧ್ಯದಲ್ಲೇ ಪಾತ್ರೆಯಲ್ಲಿ ಕೋಳಿಮೊಟ್ಟೆಯನ್ನಿಟ್ಟು ಹೆಗ್ಗಣದ ಮರಿ ಮಾಡುವ ಕಾಲ ದೂರವಿಲ್ಲವೆಂದು ಯೋಚಿಸಹತ್ತಿದನು. ಇಷ್ಡಲ್ಲದೇ ಆ ಕೆಂಪುತೋಟದಲ್ಲಿ ದುಡಿಮೆ ಮಾಡುತ್ತಿರುವ ಚಿಕ್ಕ ಮಕ್ಕಳನ್ನು ಕಂಡನು, ದುಡಿಮೆಗೆ ನೂಕುತ್ತಿದ್ದ ಅವರ ಪಾಲಕರನ್ನು ನೋಡಿದನು. ಹಗಲು ದರೋಡೆಕಂಡನು. ಮೋಸದ ತೀವ್ರತೆಯೆ ಮುಖ ನೋಡಿದನು.

                ಛೀ...!! ಈ ಫ್ಲಾಪೀಬಾಯ್ ಸರಿ ಇಲ್ಲ, ಅವನ ಕಣ್ಣುಗಳೂ ಕೂಡಾ ಬರೀ ಬ್ಯಾಡದ್ದನ್ನೇ ನೋಡ್ತಾವೆ ಅಂದ್ರೆ ಬಹುಶಃ ತಪ್ಪಾಗ್ತದೆ. ಯಾಕೆಂದರೆ ಅವನು ನೋಡಿದ ಕಡೆಯೂ ಒಲವಿತ್ತು, ಪ್ರೀತಿಯ ಸೆಲೆಯಿತ್ತು, ಅಲ್ಲಿಯೂ ಭಾರತೀಯತೆಯನ್ನು ಪ್ರತಿಬಿಂಬಿಸಿದ ಪಾಶ್ಚಾತ್ಯರ ಕುಲವಿತ್ತು. ಆಹಾರಕ್ಕಾಗಿ ಭೇಟೆಯಾಡುವ ಛಲವಿತ್ತು. ದೀನರಿಗೆ ಸಹಾಯಮಾಡುವ ಮಾನವೀಯತೆಯ ಗುಣವಿತ್ತು. ಮುಖ್ಯವಾಗಿ ಜನರ ಬಳಿ ಸಮಯವಿತ್ತು, ಜೇಬಿನಲ್ಲಿ ಕೊಂಚ ಹಣವೂ ಇತ್ತು. ಇತ್ತು ಇಲ್ಲಗಳ ನಡುವೆ ಜೀವನದ ಹಳಿಯಿತ್ತು. ಕಾಲ ಎನ್ನುವ ಬೆಳೆಯುತ್ತಿರುವ ಬೆಳೆ ಇತ್ತು.

                 ಹೊರಗಡೆಯ ಲಾಲ್ ಬಾಗ್ ಒಳಗಡೆಯ ಲಾಲ್ ಬಾಗ್ ಗೂ ಇರುವ ಎಷ್ಟೊಂದು ಅಂತರವನ್ನು ಮನಗಂಡಿದ್ದನು ನಮ್ಮ ಫ್ಲಾಪೀಬಾಯ್. ಪ್ರಪಂಚದ ಸಾಮ್ಯತೆಯನ್ನು ಕೂಡಾ ಅಲ್ಲಿಯೆ ತಿಳಿದುಕೊಂಡನು. ಆದರೂ ಅಲ್ಲಿಯ ಪರಿಸರ ಮನುಷ್ಯನಿಗೆ ವ್ಯಂಗ್ಯಮಾಡುತ್ತಿರುವಂತೆ ಭಾಸವಾಗತೊಡಗಿತು. ಏನೋದೂ ಅರಿಯದೇ ಕ್ಷಣಕಾಲ ತಬ್ಬಿಬ್ಬಾದನು ಕೂಡಾ. ಎಲ್ಲವೂ ಅಯೋಮಯ, ಅಸ್ಪಷ್ಟ ಈ ಲೇಖನದಂತೆ.....!! ಅರ್ಥವಾದಂತಿರುತ್ತೆ ಒಮ್ಮೊಮ್ಮೆ. ಆದರೆ ನಿಜವಾಗಿಯೂ ಅರ್ಥವೆ ಇರುವುದಿಲ್ಲ. ಈ ಲೇಖನದಲ್ಲಿ ತಿರುಳಿಲ್ಲ. ಆದರೂ ಏನೋ ಇದೆ ಎನ್ನುವ ಭಾವ ಕಾಡದೇ ಇರುವುದಿಲ್ಲ. ಏನೋ ಹೇಳಬೇಕೆನಿಸುತ್ತದೆ. ಆದರೆ ಏನೂ ಉಳಿದಿರುವುದಿಲ್ಲ. ಕಾರಣ ಫ್ಲಾಪ್ ಆಗುವುದು ಫ್ಲಾಪೀಬಾಯ್ ಗೆ ಹೊಸತಲ್ಲ. ಆದರೂ ಕೆಂಪುತೋಟದಲ್ಲಿ ಏನೋ ಒಂದು ಅವ್ಯಕ್ತ ಭಾವನೆಯು ಉಳಿದು ಏಕಾಗಿ ತಾನು ಅಲ್ಲಿ ಹೋಗಿದ್ದೆನೆಂಬುದನ್ನೇ ಅವನು ಮರೆತಿರುವುದು ಮಾತ್ರ ನಿಜವಾಗಿಯೂ ಒಂದು ದುರಂತವೇ ಸರಿ.,,!!
                                                                         
                                                                                                 -ಫ್ಲಾಪೀ ಬಾಯ್