Tuesday 4 June 2013

               ಜೂನ್ 5 ಎಂಬ ವಿಶ್ವ ಪರಿಸರ (ಕರಕರ) ದಿನ

                ಒಮ್ಮೆ ಸುಮ್ನೆ ಊಹಿಸಿಕೊಳ್ಳಿ, 3030 ಇಸವಿಯದು. ಬ್ಲೂ-ಗ್ರೀನ್ ಕಾಂಬಿನೇಶನ್ ಅಲ್ಲಿದ್ದ ನಮ್ಮ ಭೂಮಿ ಆಗ ಬರೀ ಬೇಡದ ಗ್ಯಾಸ್ಗಳಿಂದ, ಬರೀ ಕೆಂಪು ಮಣ್ಣಿನಿಂದ ಧೂಳಿನಿಂದ ಆವೃತವಾದ ಬಹಳ ವರ್ಷಗಳ ನಂತರ ಕೆಸರಿನಲ್ಲಿ ಸಿಕ್ಕಿದ ಒಣಗಿದ ಮಣ್ಣಿನ ಟೆನ್ನಿಸ್ ಬಾಲ್ ತರ ಇರತ್ತೆ. ಪ್ರಾಣಿಗಳು ಅಂದರೆ ಏನೂ ಅಂತಲೇ ತಿಳಿಯದ ಬೆನ್ನಮೇಲೆ ಕಂಪಲ್ಸರೀ ಆಕ್ಸಿಜನ್ ಸಿಲೆಂಡರ್ ಸಿಕ್ಕಿಸಿಕೊಂಡ ಮಾಸ್ಕಧಾರಿ ಮಾನವರ ಜೀವನ ಇರತ್ತೆ. ಎಲ್ಲಾ ಕಡೆ ಕಾಂಕ್ರೀಟ್ ಕಾಡು ತುಂಬಿದ್ದು ನೆರಳು ಅಂದ್ರೆ, ನೀರಿನ ಮಳೆ ಅಂದ್ರೆ ಏನೂ ಅಂತಲೇ ತಿಳಿಯದ ನಿಮ್ಮ ಮುಂದಿನ ಜನಾಂಗ ಇರತ್ತೆ. ಕಣ್ಣುಗಳೆಲ್ಲಾ ಬರಗೆಟ್ಟು ಕಜಕಿಸ್ತಾನದ ಮರುಭೂಮಿ ತರ ಪಳಪಳ ಅಂತಿರುತ್ತೆ. ಈಗೆಲ್ಲಾ ಯೆರ್ರಾಬಿರ್ರಿ ತಿಂದು ದೈತ್ಯ ದೇಹ ಬೆಳೆಸಿದ ಮಾನವರೆಲ್ಲಾ ಆಗ ಅಂದಿನ ಅಜ್ಞಾನಿಗಳಿಗೆ, ಕ್ಷಮಿಸಿ ವಿಜ್ಞಾನಿಗಳಿಗೆ ಸಂಶೋಧನೆಯ ವಸ್ತುಗಳಾಗಿರುತ್ತೆ. ಎಲ್ಲಾ ಕಡೆ ಬಿಸಿ ಬಿಸಿ ಬಿಸಿ, ಆದರೂ ರೊಮ್ಯಾಂಟಿಕ್ ಹಾಟ್ ಕೆಲಸಗಳಿಗೆ ಅವಕಾಶ ಇಲ್ದೆ, ಬಟ್ಟೆ ಬರೆ ತೆಗಿಯಕ್ಕಾಗದೇ ಮಾನವರು ಮುಂದಿನ ತಮ್ಮ ತಲೆಮಾರು ಬೆಳೆಸಲು ತುಂಬಾನೇ ಕಷ್ಟಪಡಬೇಕಾಗುತ್ತೆ. ಇಂದಿನ ಸುಡಾನ್ ದೇಶದ ಶಕ್ತಿಹೀನ, ಕಳಾಹೀನ, ಮಾಂಸವಿಲ್ಲದ ಬರೀ ಬ್ಲಾಕ್ ಸ್ಕಿನ್ ಲೆಯರ್ಡ್ ಬ್ಯೂಟಿಗಳೇ ವಿಶ್ವದ ಎಲ್ಲಾಕಡೆ ಇದ್ದರೆ ಹೇಗಿರುತ್ತೆ. ಫ್ಯಾಷನ್ ಷೋಗಳಲ್ಲಿ ಮಾಡೆಲ್ಗಳು ಎಕ್ಸಪೋಸಿಗೆ ಅಂತ ಬರೀ ಟ್ರಾನ್ಸಪರೆಂಟ್ ಕೂಲಿಂಗ್ ಡ್ರೆಸ್ ಹಾಕ್ಕೊಂಡು ರ್ಯಾಂಪ್ ಮೇಲೆ ನಡೀತಾ ಇದ್ರೆ ಅದನ್ನು ನೋಡುವ ನಮ್ಮ ಅಂದಿನ ಪ್ರಜೆಗಳ ರಸಿಕ ಕಣ್ಣು, ತಲೆಗಳು  ಎಷ್ಟು ಪಾಪ ಮಾಡಿರಬಹುದು ಅಂತ ಹಾಗೆ ಒಮ್ಮೆ ಯೋಚಿಸಿ. ಇನ್ನೂ ಹೀಗೆ ಮುಂದಿನ ಭವಿಷ್ಯದ ಬಗ್ಗೆ ಹೇಳುತ್ತಾ ಹೋದರೆ ಒದುತ್ತಿರುವ ನಿಮ್ಮ ಕಣ್ಣುಗಳು ಮತ್ತು ತಲೆಯೊಳಗಿನ ಮಿದುಳು ಸೈನೆಡ್ ತಿಂದು ಸೂಸೈಡ್ ಮಾಡಿಕೊಳ್ಳುವ ಸಂಭವವಿದ್ದು ಆದ್ದರಿಂದ ಒಮ್ಮೆ ನಿಮ್ಮ ಊಹಾ ಲೋಕದಿಂದ ಈಗಿನ 2013ಕ್ಕೆ ವಾಪಸ್ ಬನ್ನಿ.
                          ಅಯ್ಯೋ ಆಗ್ಲಿಂದ ಇಷ್ಟೆಲ್ಲಾ ಮಾತಾಡ್ತಾ ಇರೋ ನಾನು ಯಾರು ಅಂತಲೇ ನಿಮಗೆ ಹೇಳಿಲ್ಲ ಅಲ್ವ. ನಾನೊಂದು ಮರ,..!! ಮನುಷ್ಯರೇ ನೀವೇ ನನಗೊಂದು ಏನೇನೋ ಹೆಸರಿಟ್ಟಿದೀರಾ..! ವೈಜ್ಞಾನಿಕ ಹೆಸರಂತೆ, ಆಡುಭಾಷೆಯ ಹೆಸರಂತೆ ಹೀಗೆ, ನನಗೆ ಬಾಯಿ ಇದ್ರೆ ಕೇಳಿ ಕಂಫರ್ಮ್  ಮಾಡ್ಕೋತಾ ಇದ್ದೆ, ಏನು ಮಾಡದು? ಗಾಡು ನಂಗೆ ಯೋಚಿಸುವ ಮನಸ್ಸು ಕೊಟ್ಟ ಆದರೆ ಬಾಯೇ ಕೊಟ್ಟಿಲ್ಲ ನಾನು ಕಳೆದ ಸುಮಾರು 2000ವರ್ಷಗಳಿಂದ ಇಲ್ಲೇ ನಿಮ್ಮ ಸ್ಯಾಂಕಿಟ್ಯಾಂಕಿಯ ದಿಬ್ಬದ ಮೇಲೆ ಒಂಟಿಕಾಲಲ್ಲಿ ಬೇರು ಬಿಟ್ಟುಕೊಂಡು ನಿಂತಿದ್ದಿನಿ. ನಿಮ್ಮ ಜನಾಂಗದ ಎಷ್ಟೆಷ್ಟೋ ಜನರನ್ನ ನೋಡಿ ಬಿಟ್ಟಿದೀನಿ. ಆಗೆಲ್ಲ ನಾನು ನೋಡುವಷ್ಟು ದೂರವೂ ನಮ್ಮ ವಂಶಜರೇ ಇಲ್ಲೆಲ್ಲಾ  ಕಾಣಸಿಗುತ್ತಿದ್ದರು. ದುರಂತ ನೋಡಿ ಈಗ ಇಲ್ಲಿ ನಾನೊಬ್ಬಳೆ ಜಂಟಿಯಿಲ್ಲದೆ ಒಂಟಿಯಾಗಿ ಆಗಾಗ ಮನುಷ್ಯರಿಂದ ಅಲ್ಲೊಮ್ಮೆ ಇಲ್ಲೊಮ್ಮೆ ಕೊಡಲಿ ಏಟು ತಿಂದು ಅರೆಜೀವವಾಗಿ ಸಲದ ಮಳೆಗಾಲದ ಜೋರುಮಳೆಗೆ ಬುಡಸಮೇತ ಬೀಳುವ ದಿನಕ್ಕೆ ಎದುರು ನೋಡ್ತಾ ಇದೀನಿ. ಆಗಿನ ಕಾಲ ನಮ್ಮ ವಿಜೃಂಭಣೆಯ ಉತ್ತುಂಗದ ಕಾಲವದು. ಎಲ್ಲೆಲ್ಲೂ ನಮ್ಮವರೇ.! ಹಚ್ಚಹಸಿರು ಪರಿಸರ, ಪ್ರಾಣಿಪಕ್ಷಿಗಳ ಜೊತೆ ನಮ್ಮ ಅನ್ಯೋನ್ಯ ಜೀವನ, ಜೊತೆಗೆ ಆಗಾಗ ಸೀಜನ್ನಿಗೆ ಸರಿಯಾಗಿ ಬೀಳುತ್ತಿದ್ದ ದಂಡಿ ದಂಡಿ ಮಳೇ, ಜೊತೆಗೆ ಎಲ್ಲರಿಗೂ ಉಪಯೋಗಕಾರಿಯಾಗಿ ಜೀವಿಸುತ್ತಿದ್ದ ನಮ್ಮ ವಂಶಜರು, ಈಗ ಬರೀ ನನ್ನ ನೆನಪಷ್ಟೇ..!! ನಾನೂ ಈಗಲೋ ಆಗಲೋ ಅನ್ನುತ್ತಾ ದಿನ ಎಣಿಸುತ್ತಾ ಇದ್ದರೂ ನಮ್ಮ ಕಣ್ಣು ಮುಂದೆಯೇ ಬೆಳೆದು ನಮ್ಮ ಬುಡಕ್ಕೇ ಪರಶುರಾಮನ ಆಯುಧವಿಟ್ಟ ಮನುಷ್ಯರ ಬಗ್ಗೆ ನನಗೆ ಸಿಟ್ಟಿಲ್ಲ, ನಮ್ಮ ಒಡನಾಡಿಯಾಗಿದ್ದ ಜಲ ಪರಿಸರ ಇವನ್ನೆಲ್ಲಾ ಹಾಳುಮಾಡಿದ ಹಾಳುಮಾಡುತ್ತಿರುವ ಬಗ್ಗೆ ಆಕ್ರೋಶವಿಲ್ಲ,, ಬದಲಾಗಿ ಅನುಕಂಪವಿದೆ. ರಿಯಲೀ ಪಿಟಿಯು..!! :(
                            ಅದೇನೋ ವರ್ಷವರ್ಷ ಮನುಜರು ನಮ್ಮ ದಿನ ಅಂತ ಜೂನ್ 5ಕ್ಕೆ ಪರಿಸರ ದಿನ ಆಚರಿಸುತ್ತಾರೆ. ಪ್ರಶಸ್ತಿಗಾಗೋ, ಪ್ರತಿಷ್ಠೆಗಾಗೋ ಎಲ್ಲಾ ಕಡೆಯಿಂದಲೂ ಹುಡುಕಿ ತಡಕಿ ಒಂದಿಷ್ಟು ನಮ್ಮ ಪೀಳಿಘೆಯ ಸಸಿಗಳನ್ನು ತಂದು ನೆಡುತ್ತಾರೆ. ಜೋರು ಭಾಷಣ, ಚಪ್ಪಾಳೆಯ ರಿಂಗಣ. ಸಿಹಿ ಹಂಚಿಕೊಂಡು ನಂತರ ಬಿಸಿಲ ಬೇಗೆ ಹೆಚ್ಚುತ್ತಿದ್ದಂತೆ ಮಕಾ ಮುಚ್ಚಿಕೊಂಡು ಎಲ್ಲೆಲ್ಲೋ ಚದುರಿಹೋಗುತ್ತಿರುವುದನ್ನ ನಾನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇನೆ. ಎಲ್ಲರಿಗೂ ನಮ್ಮ ಬಗ್ಗೆ ಕಳಕಳಿಯಿದೆ. ಆದರೆ ಸಮಯದ್ದೇ ಸಮಸ್ಯೆ ಅಂತೆ, ಮೇಲಾಗಿ ಎನೇನೋ ಕಾರಣಗಳಿಗಾಗಿ ನಮ್ಮನ್ನೆಲ್ಲಾ ಕಡಿಯುವುದು ಅನಿವಾರ್ಯವಂತೆ. ನಮ್ಮನ್ನು ಕಡಿಯುವುದರ ಬಗ್ಗೆ ಆಕ್ಷೇಪವಿಲ್ಲ. ಇದರಿಂದ ಅವರ ಜೀವನಕ್ಕೇ ಅವರೇ ಕೊಕ್ಕೆ ಹಾಕಿಕೊಳ್ಳುವುದ ನೋಡಿದರೆ ನಿಜಕ್ಕೂ ನನಗೆ ಖೇದವಾಗುತ್ತಿದೆ. ನನ್ನ ಪ್ರಶ್ನೆ ಇಷ್ಟೇ, ಪರಿಸರ ದಿನವೇಕೇ ಒಂದೇ ದಿನಕ್ಕೆ ಸೀಮಿತವಾಗಿರುವುದು? ಎಲ್ಲೋ ಮಾಡುವ ಬರೀ ಭಾಷಣಗಳಿಂದ, ಅಲ್ಲೇಲ್ಲೋ ಮೂಲೆಯಲ್ಲಿ ಕೂತು ನೀವು ಬರೆವ ಲೇಖನಗಳಿಂದ ಪರಿಸರ ಸುಧಾರಣೆ ಎಷ್ಟರ ಮಟ್ಟಿಗೆ ಇಲ್ಲಿಯವರೆಗೆ ಸಾಧ್ಯವಾಗಿದೆ?? ನಮ್ಮಂತ ಮರಗಳ ಮಾರಣಹೋಮ ಏಕೆ ಇನ್ನೂ ನಿಂತಿಲ್ಲ.??? ಬುದ್ದಿಜೀವಿ ಅನ್ನಿಸಿಕೊಂಡು ಏನೇನೋ ಮಾಡುವ, ಸಾಧಿಸುವ ಮನುಷ್ಯರೇ ಹೀಗಾಡುತ್ತಿರುವುದು ನಿಜವಾಗಿಯೂ ದುರಂತವೇ ಸರಿ.!! ಅವರ ಅವಸಾನ ಅವರ ಕೈಯಲ್ಲೇ ಇದ್ದರೂ ಅರಿಯದ ಮೂರ್ಖರಾದರೇನೋ ಅನ್ನುವ ದಿಗಿಲು ನನಗೆ ಕಾಡಲಾರಂಭಿಸಿದೆ. ನನಗೆ ಬಾಯಿಯಿಲ್ಲ, ನನ್ನ ಕಷ್ಟಗಳು ಹೀಗೇ, ಬರೀ ಯೋಚಿಸಿ ಯೋಚಿಸಿ ಒಮ್ಮೊಮ್ಮೆ ಗೊಳೋ ಎಂದು ಗೋಳಾಡಿ ನನ್ನ ಕೋನೆ ದಿನಗಳನ್ನು ಎಣಿಸುತ್ತಿರುವೆ. ಈಗಲೂ ಕಾಲ ಮೀರಿಲ್ಲ, ಸರಿಯಾದ ದಿಸೆಯಲ್ಲಿ ಮುನ್ನುಗ್ಗಿ ಪರಿಸರ ರಕ್ಷಣೆಯ ಹೊಣೆ ಹೊತ್ತ ಮನುಜರು ನಿಷ್ಕಲ್ಮಶವಾಗಿ ಅವರ ಜವಾಬ್ದಾರಿ ನಿಭಾಯಿಸಿದರೆ ಅವರೂ ಅವರ ಮುಂದಿನ ಮಕ್ಕಳೂ, ನಮ್ಮ ಪರಿಸರವೂ ಮತ್ತೆ ಅನ್ಯೋನ್ಯವಾಗಿ ಜೀವಿಸುವಂತಾಗಲಿ ಎಂದು ನಾನು ನೊಂದ ಹೃದಯದಿಂದ ಬಯಸುತ್ತಿದ್ದೇನೆ.
                             ಮತ್ತೊಮ್ಮೆ ಇಂದು ಇಂದು ಜೂನ್ 5 ವಿಶ್ವ ಪರಿಸರ ದಿನ ಬಂದಿದೆ. ತರಾರುರಿಯಲ್ಲಿ ಹೇಗೋ ಏನೋ ಕರಕರವೆಂದು ಆಚರಿಸುವ ಬದಲು, ನೂರು ಹೊಸ ಸಸಿಗಳನ್ನು ನೆಟ್ಟು ನಂತರದ ನಿನಗಳಲ್ಲಿ ಅದನ್ನ ಒಣಗಿಸುವುದ ಬಿಟ್ಟು, ನೆಡುವ ಹತ್ತೇ ಸಸಿಯಾಗಿದ್ದರೂ ಅದು ಬೆಳೆಯುವಂತೆ ನೋಡಿಕೊಳ್ಳಿ, ಮರ ಕಡಿಯುವ ಬದಲು ಬೇರೆ ಪರ್ಯಾಯ  ಮಾರ್ಗವನ್ನು ಅರಸಿಕೊಳ್ಳಿ ಇದೇ ನೀವು ಪರಿಸರ ದಿನದಂದು ನೀವು ನನಗೆ ಕೊಡಬಹುದಾದ, ನಾನು ಬಯಸುವ ಉಡುಗೊರೆ..!! 


Monday 3 June 2013

http://www.panjumagazine.com/?p=2575

ಪಂಜುಲಿ ಪ್ರಕಟವಾದ ಲೇಖನ  

ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!!
ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ ಪರಿ ರೋಚ್ಚಿಗೆದ್ದಿರೋದು? ಸ್ವಲ್ಪ ನಂಗೂ ಹೇಳಿ ನಾನೂ ಬರುವೆ ನಿಮ್ಮ ಜೊತೆ" ಅಂತ ಸುಮ್ನೆ ಅಂದೆ ಅಷ್ಟೆ..!
"ಅದೇ ಕಣ್ರೀ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದಾರೆ ಈ **ಮಕ್ಳು, ದುಡ್ಡು ತಗೊಂಡು, ಇಡೀ ದೇಶದವರಿಗೇ ಮೋಸ ಮಾಡಿಬಿಟ್ರು. ಇವರ ಮೇಲೇ ನಂಬಿಕೆ ಇಟ್ಟು ಆರಾಧಿಸುತ್ತಿದ್ದ ನಮ್ಮಂತ ಅಸಂಖ್ಯಾತ ಅಭಿಮಾನಿಗಳಿಗೆ ನಂಬಿಕೆ ದ್ರೋಹ ಮಾಡಿಬಿಟ್ರು ಇವರು. ಇವರನ್ನ ಸುಮ್ನೇ ಬಿಡಬಾರದು. ಇವರಿಗೆ ಉಗ್ರ ಶಿಕ್ಷೆಯಾಗಬೇಕು, ನೀನೂ ಬಾ, ಈ ಫೋಟೋಗೆ ಒಂದೆರಡು ಏಟು ಹಾಕ್ತಾ ಇರು, ಅಷ್ಟರಲ್ಲಿ ಟೀವೀಯವರು, ಪೇಪರ್‍ನವರು ಎಲ್ರೂ ಬರ್ತಾರೆ ಆಮೇಲೆ ಒಂದು ನಾಕು ಮಾತಾಡಿ, ಇವತ್ತಿನ ಪ್ರತಿಭಟನೆ ಮುಗಿಸೋಣ" ಅಂತ ಅಂದ ಹಳೇ ದೋಸ್ತನ ತರಾ.
ನಾನಂದೆ "ಸರಿ ಆದ್ರೆ ನಾನಿನ್ನು ಅಮಾಯಕ ಇದರ ಬಗ್ಗೆ ಜಾಸ್ತಿ ತಿಳಿಸಿ ಸಾರ್, ಕೆಲ ಸಂದೇಹಗಳಿವೆ ನೀವು ಪರಿಹರಿಸಬೇಕು.. ಹಂಗಾದ್ರೇ ನಾನೂ ಒಂದಿಷ್ಟು ಹುಡುಗರನ್ನ ಗುಡ್ಡೆ ಹಾಕ್ಕಂಡು ಬರ್ತೀನಿ ಎಲ್ರೂ ಸೇರಿ ನಿಮ್ಮ ಅಧ್ಯಕ್ಷತೆಯಲ್ಲಿ ಜೋರಾಗಿ ಪ್ರತಿಭಟನೆ ಮಾಡುವ, ಹಾಗೇ ಕೆಲ ರಿಪೋರ್ಟರ್ಸ ಕೂಡಾ ಗೊತ್ತು ಅವರನ್ನೂ ಬರಕ್ಕೆ ಹೇಳ್ತೀನಿ, ಒಂದೊಳ್ಳೆ ಕೆಲಸಾನ ಜೋರಾಗಿ ಮಾಡುವ" ಹೀಗೆ ಹೇಳುತ್ತಿದ್ದಂತೆ,
ಇನ್ನೊಬ್ಬ ಉಂಡಾಡಿ ಗುಂಡನ ತರ ಇದ್ದ ಯಾರೋ ಇಂಟರೆಸ್ಟ ಸನ್ ಮುಂದೆ ಬಂದು ಹೇಳಿದ, " ಬಾರೋ ತಮಾ, ನಾನೇ ಈ ಪ್ರೊಟೆಸ್ಟಗೆ ಹೆಡ್ಡು, ಕೇಳು ಏನ್ ನಿನ್ ಡೌಟು?"
ನಾನಂದೆ "ಏನಿಲ್ಲ ಸರ್, ಆ ಲೀಗ್ ಮ್ಯಾಚಲ್ಲಿ ಯಾರೋ ದುಡ್ಡಿಸ್ಕೊಂಡು ಫಿಕ್ಸ ಮಾಡ್ಕೊಂಡು ಆಡಿದ್ರೆ ಅವರು ಆ ಫ್ರಾಂಚೈಸಿಗೆ ಮೋಸ ಮಾಡಿದ ಹಾಗಲ್ಲವಾ? ಅವರು ನಮಗೆ ಹೇಗೆ ಮೋಸ ಮಾಡಿದರು? ಅವರು ಗೆದ್ರೂ ಸೋತ್ರೂ ನಮಗೇನು ಸಿಗತ್ತೆ?"
"ಇಲ್ಲಿ ನಂಬಿಕೆ ಮುಖ್ಯ.. ನಾವು ಆ ಟೀಮ್ ಸಪೋರ್ಟರ್ ಆಗಿದ್ದು, ನಮ್ಮ ಕೆಲಸ ಕಾರ್ಯ ಎಲ್ಲ ಬಿಟ್ಟು ಕ್ರಿಕೇಟೇ ನಮ್ಮ ಧರ್ಮ ಅಂದುಕೊಂಡು ಮ್ಯಾಚ್ ನೋಡ್ತಾ ಇರ್ತೀವಿ, ಅವಾಗವಾಗ ಸುಮ್ನೇ ವಿನೋದಕ್ಕಾಗಿ ಪ್ರೆಂಡ್ಸ ಹತ್ರ ಬೆಟ್ಟಿಂಗ್ ಸಹಾ ಕಟ್ಟಿರುತ್ತೀವಿ. ಈ ನನ್ನ್ ಮಕ್ಳು ಹೀಗೆ ಮಾಡೋದ್ರಿಂದ, ಗೆಲ್ಲೊ ಮ್ಯಾಚ್ ಸೋಲೋದ್ರಿಂದ ಬೆಟ್ಟಿಂಗ್ ಕಟ್ಟಿದ ಎಷ್ಟು ಜನಾ ಬೀದಿಗೆ ಬರ್ತಾರೆ ಗೊತ್ತಾ? ಯಾರಿಗೂ ಇದರ ಬಗ್ಗೆ ಕೇರ್ ಇಲ್ಲ. ಇಂದು ಅವರ ಟೀಮಿಗೆ ಮೋಸ ಮಾಡಿದೋರು ನಾಳೆ ಇದೇ ದುಡ್ಡಿಗೋಸ್ಕರ ನಮ್ಮ ದೇಶಕ್ಕೆ ಮೋಸ ಮಾಡೋಲ್ಲ ಅಂತ ಏನು ಗ್ಯಾರಂಟಿ? ಅದಿಕ್ಕೆ ನಾವು ಪ್ರತಿಭಟನೆ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿ, ಮುಂದೆ ಈ ತರ ಎಲ್ಲೂ ಆಗದೇ ಇರಲಿ, ತಪ್ಪು ಮಾಡಿದವರಿಗೆ ಉಗ್ರ ಶಿಕ್ಷೆಯಾಗಲಿ ಎನ್ನುವುದೇ ನಮ್ಮ ಉದ್ದೇಶ" ಅಂತ ಅಂದ.
"ವ್ಹಾವ್ !! ಸೂಪರ್ ಸರ್ ನೀವು, ನಿಮ್ಮಂತವರು ಬೇಕು ನಮ್ ಸಮಾಜಕ್ಕೆ, ಅದಿರ್ಲಿ ಈಗ ಇದು ಬೆಟ್ಟಿಂಗ್ ಪರವಾಗಿ ಫಿಕ್ಸಿಂಗ್ ವಿರುದ್ದವಾಗಿ ಇದು ನಿಮ್ಮ ಪ್ರತಿಭಟನೇಯೋ ಹೇಗೆ? ಫಿಕ್ಸಿಂಗ್ ಈಗ ಟ್ರೆಂಡು, ರಾಜಕಾರಣೀಗಳ ಕ್ಷೇತ್ರದಿಂದ ಹಿಡಿದು ಗೋಲಿ ಆಡೋ ಮಕ್ಕಳವರೆಗೂ ಈಗ ಎಲ್ರೂ ಫಿಕ್ಸ್ ಆಗೇ ಇರ್ತಾರೆ. ಕಸೀನೋ ರಾಯಲ್‍ನಿಂದ ಪಾಯಿಕಾನೆ ಮನೆವರೆಗೂ ಎಲ್ಲರೂ ಫಿಕ್ಸು, ಎಲ್ಲವೂ ಫಿಕ್ಸು. ಮೊದಲೆಲ್ಲಾ ಪ್ರೇಮಿಗಳ ಬಾಯಲ್ಲಿ ಮಾತ್ರಾ ಕೇಳ್ತಾ ಇದ್ದ ಈ ಸ್ಪಾಟ್ ಫಿಕ್ಸ್, ಡೇಟ್ ಫಿಕ್ಸ್, ಇಂದು ಚೆಡ್ಡಿ ಹಾಕೋ ಹುಡುಗಂಗೂ ಚಾಕಲೇಟ್ ಆಮಿಷ ತೋರಿಸಿ ಫಿಕ್ಸ್ ಮಾಡಬೇಕಾದ ಪರಿಸ್ಥಿತಿ ಇದೆ. ಫಿಕ್ಸ್ ಇಲ್ಲದೇ ಸಕ್ಸಸ್ ಇಲ್ಲ ಅಂತಾ ಎಲ್ಲರೂ ತಿಳ್ಕೊಂಬಿಟ್ಟಿದ್ದಾರೆ. ಈಗ ಹೇಳಿ ಈ ಪ್ರತಿಭಟನೆ ಜೊತೆಗೆ ಬೆಟ್ಟಿಂಗನ್ನೂ ಕೂಡಾ ರಾಷ್ಟ್ರೀಕರಣ ಮಾಡಿ, ಡರ್ಬೀ ರೇಸ್ ತರಾ ಒಪನ್ ಬೆಟ್ಟಿಂಗಿಗೆ ಮನವಿ ನೀಡೋಣವಾ? ಅದರಿಂದ ಕೆಲವು ಮಾಮಂದಿರಿಗೆ ಅವಾಗವಾಗ ಕೊಡಬೇಕಾದ ಮಾಮೂಲಿಯಾದ್ರೂ ಉಳಿಯತ್ತೆ, ಹೆದರಿಕೊಂಡು ಬೆಟ್ಟಿಂಗ್ ಆಡಿ ಬೀದಿಗೆ ಬೀಳೋ ಬದಲು ರಾಜಾರೋಷವಾಗಿ ಮೊರಿ ಸೇರೋಣ, ಏನಂತೀರಾ?" ಎಂದೆ ಅವನನ್ನು ಲಾಕ್ ಮಾಡುವ ಉದ್ದೇಶದಿಂದ.
"ಅಯ್ಯೋ ಬೆಟ್ಟಿಂಗ್ ವಿಷ್ಯ ಬೇಡಾ ಮಾರಾಯ, ಫಿಕ್ಸಿಂಗ್ ಬಗ್ಗೆ ಅಷ್ಟೆ ನಾವು ಮಾತಾಡುವ, ಏನೋ ಸ್ವಲ್ಪ ಪೇಪರು, ಟೀವಿಲಿ ನಮ್ ಮುಕ ತೋರಿಸಿ, ಸ್ವಲ್ವ ಹೆಸರು ಗಿಸರು ಮಾಡ್ಕಂಡು ಮುಂದೆ ರಾಜಕೀಯಕ್ಕೆ ಧುಮುಕಿ ಒಳ್ಳೆ ಆಡಳಿತ ಕೊಟ್ಟು ಜನರ ಸೇವೆ ಮಾಡುವ ಅಂತಿದ್ರೆ ನೀ ದಾರಿ ತಪ್ಪಿಸುವ ಮಾತಾಡಿ ನಮಗೂ ಕಂಫ್ಯೂಜ್ ಮಾಡಿಸಿ ತಲೇಲಿ ಹುಳಾ ಬಿಟ್ಟಿರೋ ನಿನ್ನ ಹೆಸರೇನಯ್ಯಾ?" ಅಂತ ಅಂದ ವಿಚಿತ್ರವಾಗಿ.
"ಸುಮ್ನೇ ಇರೀ ಸರ್ ನನ್ನ್ ಹೆಸರು ಕೇಳಿದ್ರೆ ನಿಮ್ ಕಿವಿಯಿಂದ ಕಂಬಳಿಹುಳ ಬುದುಬುದು ಅಂತಾ ಉದುರೋ ಸಂಭವ ಇದೆ. ನೀವ್ ಕಂಟಿನ್ಯೂ ಮಾಡಿ ನಿಮ್ಮ ಚಪ್ಪಲಿ ಬಡಿಯೋ ಕೆಲಸಾನ, ನಮ್ಮ ಜನಗಳ ಮೈಂಡೇ ಸರಿಯಾಗಿ ತಲೆಯೊಳಗೆ ಫಿಕ್ಸ್ ಆಗಿದೆಯೋ ಇಲ್ವೋ ಅಂತ ಡೌಟ್ ಇದೆ ನಂಗೆ, ಇದು ಬೇರೇನ? ಜೀವನದಲ್ಲಿ ಹಾಳಾಗೋಕೂ ಬಲವಾದ ಕಾಂಪಿಟೇಶನ್ ಇದೆ ನಮ್ಮಲ್ಲಿ. ಆಟಗಾರರ ಮ್ಯಾಚ್ ಫಿಕ್ಸಿಂಗಿಗೆ ನಾವೇ ಕಾರಣ, ನಮ್ಮ ಅತಿಯಾದ ಪ್ರೀತೀ ಮತ್ತು ನಂಬಿಕೆಯೇ ಕಾರಣ ಅಂದರೂ ತಪ್ಪಾಗಲ್ಲ..! ಕೆಲ ದಿನ ಈಷಾರಾಮಿ ಜೈಲಲ್ಲಿದ್ದು, ಕೆಲದಿನ ಮಾನ ಹೋದರೂ ಇರೋ ದುಡ್ಡಿನ ಮುಂದೆ ಎಲ್ಲವೂ ಗೌಣ. ಸುಮ್ನೆ ನಾವು ನೀವು ಇಲ್ಲಿ ಚಚ್ಚಿಕೊಳ್ಳೊದ್ರಿಂದ ಏನು ಬದಲಾವಣೆಯೂ ಆಗೊಲ್ಲ, ಯಾಕಂದ್ರೆ ಪ್ಯಾಂಟ್ ಎಷ್ಟೇ ಅಗಲ ಇದ್ರೂ, ಬ್ರಾಂಡ್ ಯಾವುದೇ ಆಗಿದ್ರೂ, ಕಲರ್ ಎಷ್ಟೇ ಮಿಕ್ಸ ಇದ್ರೂ ಜಿಪ್ ಇದ್ಮೇಲೆ ಅದು ಯಾವ ಜಾಗದಲ್ಲಿ ಇರಬೇಕೋ ಅಲ್ಲೇ ಇದ್ರೆ ಉತ್ತಮ. ನನಗೆ ಗೊತ್ತು ನಿಮ್ಗೆ ಅರ್ಥ ಆಗಿರಲ್ಲ ಅಂತಾ, ಅರ್ಥ ಆದ್ರೂ ನಿಮಗೆ ಹೇಳಿಕೊಳ್ಳಕ್ಕೆ ಆಗೊಲ್ಲ ಅನ್ನೋದು ಗೊತ್ತು, ನಾನಿನ್ನು ಬರ್ಲಾ ಸರ್, ಚೊಂಬಾದ ಜೀವನದಲ್ಲಿ ಒಂದು ಬಕೀಟು ಕೊಡಿಸಪ್ಪಾ ದೇವರೇ..!!" ಅಂತಾ ನಾಟಕೀಯವಾಗಿ ಕೈಮುಗಿದು ಕೆಲಸ ಇಲ್ಲದ ಈ ನನ್ನ ಮಕ್ಕಳಿಗೆ ಹುಳ ಬಿಟ್ಟಿರೋ ಖುಷೀಲಿ ಮನೆಕಡೆ ಹೊಂಟೆ..!!